ಮುಳಬಾಗಲು: ರಾಜ್ಯ, ಕೇಂದ್ರ ಸರ್ಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿ ಜನರ ಅಭಿವೃದ್ಧಿ ಮರೆತಿವೆ ಎಂದು ಸಿಪಿಎಂ ಮುಖಂಡರು ಸೋಮವಾರ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಪಿಎಂ ರಾಜ್ಯ ಸಂಚಾಲಕ ಜೆ.ಸಿ. ಬೈಯ್ಯೊರೆಡ್ಡಿ, ಯುಪಿಎ ಸರ್ಕಾರ ಎಫ್ಡಿಐ ಜಾರಿಗೆ ತರುವ ಮೂಲಕ ಬಡಜನರ ಬದುಕು ಕಸಿದುಕೊಂಡಿದ್ದಾರೆ ಎಂದು ದೂರಿದರು.
ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಸಂಚಾಲಕ ಮಾರುತಿಮಾನ್ಪಡೆ ಮಾತನಾಡಿ, ನ.18-ಡಿಸೆಂಬರ್ 4ರವರೆಗೆ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಜನ ಜಾಗೃತಿ ಜಾಥಾ ಪ್ರಚಾರ ನಡೆಯಲಿದೆ ಎಂದು ತಿಳಿಸಿದರು.
ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಜನವಾದಿ ಮಹಿಳಾ ಸಂಘಟನೆಯ ಗೀತಾ, ಸಂಗಸಂದ್ರ ವಿಜಯಕುಮಾರ್, ದಸಂಸ ಸಂಚಾಲಕ ಕೀಲುಹೊಳಲಿ ಸತೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಎಸ್.ರಮೇಶ್, ಮಡಿವಾಳ ಪಾಪಣ್ಣ, ಕಿಟ್ಟ, ಎಸ್ಎಫ್ಐ ವಾಸುದೇವರೆಡ್ಡಿ ಹಾಜರಿದ್ದರು.
`ರಾಜ್ಯಕ್ಕೆ ಸಾವಿರ ಕೋಟಿ ನಷ್ಟ'
ಮಾಲೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭ್ರಷ್ಟಾಚಾರದಲ್ಲಿ ದಾಖಲೆ ನಿರ್ಮಿಸಿವೆ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜೆ.ಸಿ.ಬೈಯ್ಯಾರೆಡ್ಡಿ ಆರೋಪಿಸಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ಸಿಪಿಎಂ ರಾಜ್ಯ ಸಮಿತಿ ಹಮ್ಮಿಕೊಂಡಿದ್ದ ಜನ ಜಾಗೃತಿ ಪ್ರಚಾರದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ರಾಜ್ಯದ ಬೊಕ್ಕಸಕ್ಕೆ 16 ಸಾವಿರ ಕೋಟಿ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ಹೇಳಿದರು.
ಸಿಪಿಎಂ ನಿರಂತರ 34 ವರ್ಷಗಳ ಕಾಲ ಪಶ್ಚಿಮಬಂಗಾಳ, ಕೇರಳದಲ್ಲಿ ಅಧಿಕಾರ ನಡೆಸಿದರೂ ಯಾವುದೇ ರೀತಿ ಅಕ್ರಮ ನಡೆಸದಿರುವುದು ಸರ್ಕಾರದ ಹೆಗ್ಗಳಿಕೆಯಾಗಿದೆ ಎಂದರು.
ಸ್ಥಳೀಯ ಮುಖಂಡರಾದ ನಾಗರತ್ನಮ್ಮ, ಚಲಪತಿ, ಅರಳೇರಿ ಗ್ರಾ.ಪಂ.ಸದಸ್ಯ ಅಶೋಕ್ ಉಪಸ್ಥಿತರಿದ್ದರು.