ಬಂಗಾರಪೇಟೆ: ವಿದ್ಯಾರ್ಥಿ ದಿನಾಚರಣೆ ಘೋಷಣೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ತಾಲ್ಲೂಕದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಡಾ.ಅಂಬೇಡ್ಕರ್ ಅವರು ನ.7 1900ರಲ್ಲಿ ಸತಾರ ಜಿಲ್ಲೆಯ ರಾಜವಾಡ್ ಪ್ರತಾಪ್ ಸಿಂಹ ಶಾಲೆಯಲ್ಲಿ ದಾಖಲಾಗುವ ಮೂಲಕ ತಮ್ಮ ವಿದ್ಯಾರ್ಥಿ ಜೀವನ ಆರಂಭಿಸಿದ್ದರು. ಆ ದಿನವನ್ನು ವಿದ್ಯಾರ್ಥಿಗಳ ದಿನ ಎಂದು ಘೋಷಿಸಬೇಕು ಎಂದು ತಾಲ್ಲೂಕು ಸಂಚಾಲಕ ರಾಮಪ್ಪ ಒತ್ತಾಯಿಸಿದರು.
ಅಂಬೇಡ್ಕರ್ ಅವರು ಶಾಲೆಯಲ್ಲಿ ಶಿಸ್ತಿನ ಸಿಪಾಯಿಯಾಗಿದ್ದರು. ನಿಷ್ಠಾವಂತ, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.
ಮಹಾರಾಷ್ಟ್ರ ಸರ್ಕಾರ ನ.7 ಅನ್ನು ವಿದ್ಯಾರ್ಥಿ ದಿನಾಚರಣೆ ದಿನ ಎಂದು ಘೋಷಣೆ ಮಾಡಿದೆ. ಎಲ್ಲ ರಾಜ್ಯಗಳಲ್ಲಿಯೂ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ಮನವಿಗೆ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡ ಸಿ.ಜೆ.ನಾಗರಾಜ್ ಮಾತನಾಡಿ, ‘ಅಂಬೇಡ್ಕರ್ ಅವರ ಆದರ್ಶ ವಿಶ್ವಕ್ಕೆ ಸ್ಫೂರ್ತಿ. ಅವರ ಶೈಕ್ಷಣಿಕ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಭಾರತ ದೇಶ ಇತರ ದೇಶಗಳಿಗೆ ಮಾದರಿಯಾಗಿದೆ’ ಎಂದು ಹೇಳಿದರು.
ದಸಂಸ ತಾಲ್ಲೂಕು ಘಟಕ ಸಂಘಟನೆ ಸಂಚಾಲಕ ಸಿ.ಬಸಪ್ಪ, ಹುನ್ಕುಂದ ದೇವರಾಜ್, ಮಹಿಳಾ ಒಕ್ಕೂಟದ ಸಂಚಾಲಕಿ ಚಿಕ್ಕವಲಗಮಾದಿ ಲಕ್ಷಮ್ಮ, ಮಾಲಾ, ಬೇತಮಂಗಲ ಹೋಬಳಿ ಸಂಚಾಲಕ ಕಂಬಾರ್ಲಹಳ್ಳಿ ರಾಮಪ್ಪ, ಸಂಘಟನೆ ಸಂಚಾಲಕ ಸೂಲಿಕುಂಟೆ ವೆಂಕಟರಾಜು, ರಾಧಾಕೃಷ್ಣ, ಸೀಸಂದ್ರ ಎಂ.ಎನ್.ಭಾರದ್ವಾಜ್ ಇದ್ದರು.