ಶಾಲೆ ಮುಖ್ಯ ಶಿಕ್ಷಕಿ ಮುನಿರತ್ನಮ್ಮ ಮಾತನಾಡಿ, ನಿಸರ್ಗದ ನಡುವೆ ಮಕ್ಕಳು ಲವಲವಿಕೆಯಿಂದ ಕಲಿಯುತ್ತಾರೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ವನಭೋಜನ ಸಂಸ್ಕೃತಿ ಇತ್ತು. ಮನೆ ಮಂದಿ ಪಕ್ಕದ ಕಾಡಿಗೆ ಹೋಗಿ ಊಟ ಮಾಡಿ ಬರುತ್ತಿದ್ದರು. ಆದರೆ ಅದು ನಿಂತಿದೆ. ಅದರ ಮುಂದುವರೆದ ಭಾಗವಾಗಿ ಶಾಲೆಗಳಲ್ಲಿ ಹೊರ ಸಂಚಾರ ನಡೆಯುತ್ತಿದೆ. ಇದು ಪೂರ್ಣವಾಗಿ ಶೈಕ್ಷಣಿಕ ಉದ್ದೇಶ ಒಳಗೊಂಡಿದೆ ಎಂದು ಹೇಳಿದರು.
ಶಿಕ್ಷಕಿಯರಾದ ವಿಜಯಕುಮಾರಿ, ಪ್ರಮೀಳಾ, ಲಕ್ಷ್ಮಿದೇವಮ್ಮ, ಸುಶೀಲಮ್ಮ, ಶಾಂತಮ್ಮ, ಶ್ರೀಧರ್, ಎಸ್ಡಿಎಂಸಿ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಾಡಿನ ಪರಿಚಯವಿದ್ದರೂ ಪಟ್ಟಣದ ಸ್ನೇಹಿತರ ಜತೆ ಕಾಡಿನಲ್ಲಿ ಸಂಚರಿಸಿ ವಿವಿಧ ಗಿಡ ಮರಗಳ ಪರಿಚಯ ಮಾಡಿಕೊಂಡರು. ವಿವಿಧ ಪಕ್ಷಿಗಳು, ಬಣ್ಣದ ಚಿಟ್ಟೆಗಳು, ಹೂಗಳು, ಹುತ್ತಗಳು, ಗೆದ್ದಲು ಹೀಗೆ ಎಲ್ಲವನ್ನೂ ವೀಕ್ಷಿಸಿದರು. ಮಧ್ಯಾಹ್ನದ ಹೊತ್ತಿಗೆ ಕಾಡಿನ ಮಧ್ಯೆ ಊಟ ಮಾಡಿದರು. ವಿವಿಧ ಆಟ ಆಡಿದರು. ಸಂಜೆ ಹೊತ್ತಿಗೆ ಮನೆ ಕಡೆ ಹೆಜ್ಜೆ ಹಾಕಿದರು.