ಕುಷ್ಟಗಿ: ಪಟ್ಟಣದ ಆರಾಧ್ಯ ದೈವಗಳಲ್ಲಿ ಒಂದಾದ ಪುರಾತನ ಅಡವಿಮುಖ್ಯಪ್ರಾಣ (ಅಡವಿರಾಯ) ಜಾತ್ರಾಮಹೋತ್ಸವದ ನಿಮಿತ್ತ ಗುರುವಾರ ಮಹಾರಥೋತ್ಸವ ನೆರವೇರಿತು.
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಾಂತರ ಪ್ರದೇಶದ ಸಹಸ್ರ ಸಂಖ್ಯೆಯ ಭಕ್ತರು ಸಂಭ್ರಮದ ರಥೋತ್ಸವಕ್ಕೆ ಸಾಕ್ಷಿಯಾದರು. ಅನೇಕ ಜೋಡಿ ನವವಧುವರರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಬೆಳಿಗ್ಗೆ ದೇವಸ್ಥಾನದಲ್ಲಿ ಅಡವಿಮುಖ್ಯಪ್ರಾಣ ದೇವರಿಗೆ ಮಧುಅಭಿಷೇಕ, ಪಂಚಾಮೃತ ಅಭಿಷೇಕ, ವ್ಯಾಸಪೂಜೆ, ರಥಾಂಗ ಹೋಮ, ಪವಮಾನಹೋಮ, ಸತ್ಯನಾರಾಯಣ ಪೂಜೆ. ಸಂಜೆ ರಥೋತ್ಸವದ ನಂತರ ಹರಿವಾಣ ಸೇವೆ, ಪತ್ತಾ ಸೇವೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನೆರವೇರಿದವು.
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರನ್ನು ಜಾತ್ರಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಅನೇಕ ಗಣ್ಯರು, ಜಾತ್ರಾ ಸಮಿತಿ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.