ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ವತಿಯಿಂದ ಪದ್ಮನಾಭ ತಿರ್ಥರ 700ನೇ ವರ್ಷದ ಆರಾಧನಾ ಮಹೋತ್ಸವ ಭಾನುವಾರ ಆರಂಭವಾಯಿತು.
ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಪೂರ್ವಾರಾಧನೆ ನಡೆಯಿತು. ಸೋಮವಾರ ಮಧ್ಯಾಹ್ನದ ತನಕ ಮಧ್ಯಾರಾಧನೆ ಜರುಗಲಿದೆ.
ಪದ್ಮನಾಭತೀರ್ಥರ ಮೂಲ ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಶ್ರೀಗಳಿಂದ ಮುದ್ರಾಧಾರಣೆ, ಮೂಲರಾಮದೇವರ ಸಂಸ್ಥಾನ ಪೂಜೆ, ಹಸ್ತೋದಕ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು. ಹಸಿರು ಮಂಟಪದಿಂದ ಪುಷ್ಪಾಲಂಕಾರ ಮಾಡಲಾಗಿತ್ತು.
ಸೋಮವಾರ ಮಧ್ಯಾಹ್ನದ ಬಳಿಕ ಪದ್ಮನಾಭ ತೀರ್ಥರ ಆರಾಧನೆ ನಡೆಸಲು ಉತ್ತರಾದಿ ಮಠಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿದೆ.