ಕೊಪ್ಪಳ: ‘ಜಿಲ್ಲಾ ಕೇಂದ್ರದ ನಗರಸಭೆ ನವೀಕರಣ ಕಾಮಗಾರಿಯ ಹಿಂದೆ ಅಭಿವೃದ್ಧಿ ಮಾತ್ರವಲ್ಲದೇ ಕೆಲವರ ಹಿತಾಸಕ್ತಿ ಉದ್ದೇಶವೂ ಅಡಗಿದೆ’ ಎಂದು ನಗರಸಭೆಯ ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ಆರೋಪಿಸಿದ್ದಾರೆ.
‘ನವೀಕರಣ ಕಾಮಗಾರಿ ಬಗ್ಗೆ ನಗರಸಭೆಯ ಹಿರಿಯ ಸದಸ್ಯ ಮಹೇಂದ್ರ ಚೋಪ್ರಾ ಮಾತ್ರ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಕಾಮಗಾರಿಗೆ ಯಾವುದೇ ಟೆಂಡರ್ ಆಗಿಲ್ಲ. ಹಣ ಕೊಳ್ಳೆ ಹೊಡೆಯಲು ನವೀಕರಣ ನೆಪವನ್ನು ನಗರಸಭೆ ಮುಂದಿಟ್ಟಿದೆ. ಈ ಕಚೇರಿಯಲ್ಲಿ ಹಿಂದೆ ದುರಸ್ತಿ ಕೆಲಸವಾಗಿದ್ದರೂ ಮತ್ತೆ ಈಗ ನವೀಕರಣ ಎಂದು ಹೇಳಲಾಗುತ್ತಿದೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ನವೀಕರಣ ಕಾಮಗಾರಿ ಸ್ಥಗಿತಮಾಡಿ ವಾರ್ಡ್ಗಳ ಅಭಿವೃದ್ಧಿಗೆ ಅನುದಾನ ನೀಡಬೇಕು. ನಗರದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯಗಳ ಕೊರತೆಯಿದ್ದು, ಅವುಗಳ ನಿರ್ಮಾಣಕ್ಕೆ ಆದ್ಯತೆ ಕೊಡಬೇಕು. ವಾರ್ಡ್ಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವಂತೆ ಅಥವಾ ಸೌಲಭ್ಯಗಳನ್ನು ಕಲ್ಪಿಸುವಂತೆ ನಗರಸಭೆಗೆ ಮನವಿ ಸಲ್ಲಿಸಿದರೆ ಅದನ್ನು ಕಸದು ಬುಟ್ಟಿಗೆ ಎಸೆಯುತ್ತಾರೆ’ ಎಂದು ಆಪಾದಿಸಿದರು.
‘ನಗರಸಭೆ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದೇನೆ. ನವೀಕರಣ ಕಾಮಗಾರಿಯಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಅವರು ಆಯುಕ್ತರ ವಿರುದ್ಧ ಕ್ರಮಕ್ಕೆ ಪೌರಾಡಳಿತ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಿದ್ದಾರೆ. ಅಲ್ಲಿಯೂ ಕ್ರಮ ಕೈಗೊಳ್ಳದಿದ್ದರೆ ಆ ಇಲಾಖೆಯ ಸಚಿವರಿಗೆ ದೂರು ನೀಡುವೆ’ ಎಂದು ತಿಳಿಸಿದರು. ಹೋರಾಟಗಾರ ರಮೇಶ ಬೂದಗುಂಪ ಇದ್ದರು.