ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ ತಾಯಿಯನ್ನು ಕೊಂದ ಮಗ; ಬೆಚ್ಚಿ ಬಿದ್ದ ಜನ

Last Updated 2 ಜೂನ್ 2020, 12:11 IST
ಅಕ್ಷರ ಗಾತ್ರ

ಕನಕಗಿರಿ (ಕೊಪ್ಪಳ ಜಿಲ್ಲೆ): ಹೆತ್ತ ತಂದೆ- ತಾಯಿಯನ್ನು ಮಗನೊಬ್ಬ ಕೊಂದು ಹಾಕಿದ ಹೃದಯ ವಿದ್ರಾವಕ ಘಟನೆ ಪಟ್ಟಣದಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.

ಇಲ್ಲಿನ 9ನೇ ವಾರ್ಡ್ ನಿವಾಸಿಗಳಾದ ಗಿರಿಯಪ್ಪ ಮಡಿವಾಳರ (58), ಅಕ್ಕಮ್ಮ ಮಡಿವಾಳರ (52) ಮೃತಪಟ್ಟವರು.

ರಮೇಶ ಮಡಿವಾಳರ ಕೊಲೆ ಮಾಡಿದ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇದ್ದಾನೆ.

ತವರು ಮನೆಗೆ ಹೋಗಿದ್ದ ತನ್ನ ಹೆಂಡತಿ ತನುಜಾಳನ್ನು ಮನೆಗೆ ಕರೆದುಕೊಂಡು ಬರುವ ವಿಚಾರದಲ್ಲಿ ತಂದೆ ಹಾಗೂ ಮಗನ ಮಧ್ಯೆ ಉಂಟಾದ ಮನಸ್ತಾಪವೇ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ.

ಹೆಂಡತಿಯನ್ನು ಕರೆ ತರುವ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಗಿರಿಯಪ್ಪ ಮಡಿವಾಳರ ಅವರು ಅನೇಕ ಸಲ ಮಗನಿಗೆ ಬುದ್ಧಿವಾದ ಹೇಳಿದ್ದರು. ಇದನ್ನು ಲೆಕ್ಕಿಸದ ಮಗ ಇಡೀ ರಾತ್ರಿ ಪಾಲಕರ ಜತೆಗೆ ಜಗಳ ಮಾಡಿದ್ದನು. ಖಿನ್ನತೆಗೆ ಒಳಗಾಗಿದ್ದ ಆತನು ಮನೆಯಲ್ಲಿದ್ದ ಕಾರ ಕುಟ್ಟುವ ಕಬ್ಬಿಣದ ಹಾರಿಯಿಂದ ಮೊದಲಿಗೆ ತಂದೆಗೆ ಹೊಡೆಯಲು ಹೋದ, ಆಗ ಬಿಡಿಸಿಕೊಳ್ಳಲು ಬಂದ ತಾಯಿಯ ತಲೆಗೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಆಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ಆ ನಂತರ ಮಗ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ತಂದೆಯ ಕಿರುಚಾಟ ಕೇಳಿದ ನೆರೆಹೊರೆಯ ಜನ ನೋಡಲು ಬಂದಾಗ ತಂದೆ ಪ್ರಜ್ಞಾಹೀನ ಸ್ಥಿತಿಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರ ಗಾಯಗೊಂಡಿದ್ದ ಗಿರಿಯಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕೊಪ್ಪಳದ ಸಮೀಪ ತಂದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ– ತಾಯಿ ಕೊಲೆಗೀಡಾದ ಘಟನೆಯಿಂದ ಪಟ್ಟಣದ ಜನ ಬೆಚ್ಚಿ ಬಿದ್ದಿದ್ದು, ಮೃತರ ಮನೆಗೆ ಬಂದು ಕಣ್ಣೀರು ಹಾಕಿದರು.

ಮೃತರ ಮಗಳು ಈರಮ್ಮ ತಂದೆ–ತಾಯಿಯವರನ್ನು ನೆನಪು ಮಾಡಿಕೊಂಡು ಗೋಳಾಡಿ ಅಳುತ್ತಿರುವುದನ್ನು ಕಂಡ ನೆರೆದವರ ಕಣ್ಣಾಲೆಗಳು ತೇವಗೊಂಡವು. ಸಂಬಂಧಿಕರ ಆಕ್ರಂದನ‌ ಮುಗಿಲು ಮುಟ್ಟಿತ್ತು.

ಮೃತ ಗಿರಿಯಪ್ಪ ಅವರ ಸಹೋದರ ಯಂಕೋಬ ಮಡಿವಾಳರ ದೂರು ನೀಡಿದ್ದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಪೊಲೀಸ್ ಉಪ ವಿಭಾಗಾಧಿಕಾರಿ ಬಿ. ಪಿ. ಚಂದ್ರಶೇಖರ, ಗ್ರಾಮೀಣ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ತಳವಾರ, ಪಿಎಸ್‌ಐ ಪ್ರಶಾಂತ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT