ಯಲಬುರ್ಗಾ: ತಾಲ್ಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಮಾರುತೇಶ್ವರ ಜಾತ್ರೆ ಪ್ರಯುಕ್ತ ತಾಲ್ಲೂಕಿನ ಉಚ್ಚಲಕುಂಟಾ ಗ್ರಾಮದ ಮಹರ್ಷಿ ವಾಲ್ಮೀಕಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಹಶೀಲ್ದಾರ್ ಶ್ರೀಶೈಲ ತಳವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ,‘ಸಾಹಿತ್ಯ ಮತ್ತು ಸಂಗೀತ ಮನಸ್ಸಿಗೆ ಮುದ ನೀಡುವ ಹಾಗೂ ನೆಮ್ಮದಿ ಕೊಡುವ ಔಷಧಿಗಳಿದ್ದಂತೆ, ಗ್ರಾಮೀಣ ಪ್ರದೇಶದಲ್ಲಿಯೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಸ್ಥಳೀಯ ಕಲಾವಿದರು ಸಂಗೀತವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗುತ್ತಿರುವುದು ಸ್ವಾಗತಾರ್ಹ. ಗ್ರಾಮೀಣ ಕಲಾವಿದರು ಇನ್ನೂ ಹೆಚ್ಚಿನ ಸಾಧನೆ ಮಾಡಿ ಉನ್ನತಮಟ್ಟಕ್ಕೆ ಬೆಳೆಯಬೇಕು’ ಎಂದು ಹೇಳಿದರು.
ತಾ.ಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಹರ್ಲಾಪುರ ಮಾತನಾಡಿ,‘ವರ್ಷದಿಂದ ವರ್ಷಕ್ಕೆ ಜಾತ್ರೋತ್ಸವ ಅದ್ಧೂರಿತನ ಪಡೆದುಕೊಳ್ಳುತ್ತಿರುವುದು ಸಂತಸ ತಂದಿದೆ. ವಿಶಿಷ್ಟ ಆಚರಣೆಗಳು ಇಲ್ಲಿಯ ಜಾತ್ರೆಗೆ ವಿಶೇಷ ಮೆರಗನ್ನು ತಂದಿವೆ’ ಎಂದರು.
ಉಪ ತಹಶೀಲ್ದಾರ್ ವಿಜಯಕುಮಾರ ಗುಂಡೂರ ಮಾತನಾಡಿದರು. ವ್ಯವಸ್ಥಾಪಕ ಚಂದಪ್ಪ ಕುರಿ, ಗ್ರಾಪಂ ಸದಸ್ಯರಾದ ಕರಿಯಮ್ಮ ಗದ್ದಿ, ಫಕೀರಮ್ಮ ಸಿದ್ಧರ, ಮಂಜುನಾಥ ಬೇವೂರ, ಮಹಾಂತೇಶ ಪೊಲೀಸ್ಪಾಟೀಲ, ಕುಂಟೆಪ್ಪ ನಿಂದಿಹಾಳ, ಶ್ರೀಕಾಂತಗೌಡ ಮಾಲಿಪಾಟೀಲ, ಶರಣಬಸಪ್ಪ ದಾನಕೈ ಹಾಗೂ ಕುಂಟೆಪ್ಪ ಕ್ಯಾಡೇದ ಇದ್ದರು.
ಜಾನಪದ ಕಲಾವಿದರಾದ ಚಂದ್ರಶೇಖರ ಲಿಂಗದಳ್ಳಿ, ನಾರಾಯಣಪ್ಪ ಸಿರವಾರ, ಕೆ.ಹುಸೇನಸಾಬ, ವೀರಯ್ಯಸ್ವಾಮಿ, ಸುರೇಶ ಯರಗೇರಾ ಇವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಡಿ.ಎಸ್. ಪೂಜಾರ, ಸಹನಾ ಪೂಜಾರ ಸಂಗೀತ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಅಧ್ಯಕ್ಷ ಸಭಾಷ ಜಿರ್ಲಿ ಅಧ್ಯಕ್ಷತೆ ವಹಿಸಿದ್ದರು. ಭರ್ಮಪ್ಪ ಇಂದ್ರಗಿ ನಿರೂಪಿಸಿದರು.