ಅಳವಂಡಿ: ಪ್ರಸಕ್ತ ವರ್ಷ ಮುಂಗಾರು ಮಳೆ ಇಲ್ಲದೆ ಖುಷ್ಕಿ ಜಮೀನಿನಲ್ಲಿ ಬೆಳೆದ ಫಸಲು ಒಣಗಿ ಹೋಗಿದೆ. ಬೋರ್ವೆಲ್ ಮೂಲಕ ರೈತರು ಬೆಳೆಯನ್ನು ಬೆಳೆದಿದ್ದಾರೆ. ಕಾರಣ ರೈತರಿಗೆ ನಿರಂತರವಾಗಿ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಸಬೇಕು ಎಂದು ಪಂಪ್ಸೆಟ್ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಶರಣಪ್ಪ ಜಡಿ ಹೇಳಿದರು.
ಗ್ರಾಮದ ಸಿದ್ದೇಶ್ವರ ಮಠದಲ್ಲಿ ಅಳವಂಡಿ ಭಾಗದ ಪಂಪ್ಸೆಟ್ ನೀರಾವರಿ ಹೋರಾಟ ಸಮಿತಿಯ ಸದಸ್ಯರ ಸಭೆಯಲ್ಲಿ ಬುಧವಾರ ಅವರು ಮಾತನಾಡಿದರು. ನಂತರ ರೈತರಿಗೆ ಹಗಲು ವೇಳೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಸಲುವಾಗಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಮನವಿ ಸಲ್ಲಿಸಿ ವಾರದೊಳಗೆ ಸಮಸ್ಯ ಪರಿಹರಿಸದಿದ್ದರೆ ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಾಯಿತು.
ಜಿಲ್ಲಾ ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕ ಗುರುಮೂತಿಸ್ವಾಮಿ ಇನಾಮದಾರ ಮಾತನಾಡಿದರು.