ಕೊಪ್ಪಳ: ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಮಾ. 4ರಂದು ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಯಾವುದೇ ಆಮೀಷ, ಮಧ್ಯವರ್ತಿಗಳ ಭರವಸೆಗಳನ್ನು ಬಲಿಯಾಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮನವಿ ಮಾಡಿದ್ದಾರೆ.
‘ಪೊಲೀಸ್ ನೇಮಕಾತಿಯು ಪಾರದರ್ಶಕ, ಗಣಕೀಕೃತ, ಸಂಪೂರ್ಣ ವಸ್ತುನಿಷ್ಠ, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಯುತ್ತದೆ. ಯಾವುದೇ ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ ಅಥವಾ ಒಳಗಾಗಲೀ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು ಮಾಡಬಾರದು’ ಎಂದು ಹೇಳಿದ್ದಾರೆ.
4ರಂದು ಪರೀಕ್ಷೆ: ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 1:5 ಅನುಪಾತದ ಅನುಸಾರ ಮುಂದಿನ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ ಮಾ. 4ರಂದು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಿಗದಿ ಮಾಡಲಾಗಿದೆ.
2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶದ ಪೊಲೀಸ್ ಕಾನ್ಸ್ಟೆಬಲ್ 454 ಹುದ್ದೆಗಳಿಗಾಗಿ ಡಿ. 10ರಂದು ಲಿಖಿತ ಪರೀಕ್ಷೆ ನಡೆದಿತ್ತು. ಅದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಅಂದು ಬೆಳಿಗ್ಗೆ 6 ಗಂಟೆಗೆ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ ಜರುಗಲಿದೆ.
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಕರೆಪತ್ರಗಳನ್ನು ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಮಾಹಿತಿ ಪಡೆದುಕೊಳ್ಳಬೇಕು. ದೈಹಿಕ ಪರೀಕ್ಷೆಗೆ ಬರುವಾಗ ಎಲ್ಲ ದಾಖಲಾತಿ ಪಡೆದುಕೊಳ್ಳಬೇಕು ಎಂದು ಎಸ್.ಪಿ. ಹೇಳಿದ್ದಾರೆ.