ಕುಷ್ಟಗಿ: ‘ಶಿಕ್ಷಣದಿಂದ ವಂಚಿತ ಶೋಷಿತರು, ಅಸ್ಪೃಶ್ಯ ಸಮುದಾಯದ ಮಕ್ಕಳ ಎದೆಯಲ್ಲಿ ಅಕ್ಷರದ ಬೀಜ ಬಿತ್ತುವ ಮೂಲಕ ಸಾವಿತ್ರಿಬಾಯಿ ಫುಲೆ ಸಾಮಾಜಿಕ ಪರಿವರ್ತನೆಗೆ ಪಣ ತೊಟ್ಟಿದ್ದರು’ ಎಂದು ರಾಯಚೂರಿನ ಸಾಮಾಜಿಕ ಹೋರಾಟಗಾರ ಎಂ.ವಿರುಪಾಕ್ಷಪ್ಪ ಹೇಳಿದರು.
ಪಟ್ಟಣದ ಪದವಿ ಕಾಲೇಜಿನಲ್ಲಿ ಬುಧವಾರ ಪಟ್ಟಣದ ಬಸಮ್ಮ ಮರಿಯಪ್ಪ ಟ್ರಸ್ಟ್ ವತಿಯಿಂದ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಅಸ್ಪೃಶ್ಯರು, ಮಹಿಳೆಯರು, ವಿದ್ಯೆ ಕಲಿಯುವುದೇ ಅಪರಾಧ ಎನ್ನುವ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಅವರು ಮಕ್ಕಳಿಗೆ ಶಿಕ್ಷಣ ದೊರಕುವಂತೆ ಮಾಡಿದ ಕೆಲಸ ಫಲ ನೀಡುತ್ತಿದೆ. ಅವರ ಸಾರ್ಥಕ ಬದುಕು ಶಿಕ್ಷಕರು, ಭವಿಷ್ಯದ ಪೀಳಿಗೆಗೆ ಮಾದರಿಯಾಗಲಿ’ ಎಂದರು.
ಬರಹಗಾರ ಸಿ.ದಾನಪ್ಪ ನಿಲೋಗಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಮಾಲತಿ ನಾಯಕ, ಪ್ರಾಚಾರ್ಯ ಎಸ್.ವಿ. ಡಾಣಿ, ಪ್ರಾಂಶುಪಾಲೆ ಮಾಲಾಬಾಯಿ ಪಡಸಾಲಿಮನಿ, ಟ್ರಸ್ಟ್ನ ಮುಖ್ಯಸ್ಥ ಶುಕರಾಜ ತಾಳಕೇರಿ ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೀವನಸಾಬ್ ವಾಲೀಕಾರ ಸಾವಿತ್ರಿಬಾಯಿ ಫುಲೆ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಟ್ರಸ್ಟ್ ಅಧ್ಯಕ್ಷೆ ಬಸಮ್ಮ ತಾಳಕೇರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಟಿ. ರತ್ನಾಕರ, ಎಚ್.ಎಲ್. ಬಡಿಗೇರ, ಶಿಕ್ಷಕಿಯರಾದ ನಿಂಬಮ್ಮ ತುಂಬದ, ಶಂಶಾದ್ ಬೇಗಂ, ಎಂ.ಆರ್. ಭೇರಿ, ಶಿವಪ್ಪ ಭಜಂತ್ರಿ, ಅಲ್ಲಮಪ್ರಭು ಪೂಜಾರ ಇತರರು ಇದ್ದರು.