ಕನಕಗಿರಿ: ‘ಶತಮಾನಗಳಿಂದ ಶಿಕ್ಷಣದಿಂದ ವಂಚಿತಗೊಂಡ ಶೋಷಿತ ವರ್ಗಗಳಿಗೆ ಶಿಕ್ಷಣ ನೀಡಿದ ದೇಶದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಬಾಯಿ ಪುಲೆ ಅವರಾಗಿದ್ದಾರೆ’ ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ತಿಳಿಸಿದರು.
ಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆ ನಿಮಿತ್ತ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ, ಶೈಕ್ಷಣಿಕ ಕಾರ್ಯಾಗಾರ, ವರ್ಗಾವಣೆಗೊಂಡ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಹಾಗೂ ಇತರೆ ವರ್ಗಕ್ಕೆ ಶಿಕ್ಷಣ ಕೊಡಿಸುವ ಜತೆಗೆ ಪುಲೆ ಅವರು ಸಮಾಜ ಸುಧಾರಣೆ ಕೆಲಸ ಮಾಡಿದ್ದಾರೆ. ಬಾಲ್ಯ ವಿವಾಹ, ಸತಿ ಸಹಗಮನ ಪದ್ದತಿ ನಿಷೇಧಕ್ಕೆ ಶ್ರಮಿಸಿದರು.
ಶಿಕ್ಷಕರು ಸಮಾಜ ಸುಧಾರಕರಾಗಿದ್ದು ಸೇವೆಯಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಕೆಲಸ ಮಾಡಬೇಕು. ಶಿಕ್ಷಕರ ನಡಾವಳಿಕೆಯು ಯಾರು ಪ್ರಶ್ನಿಸದಂತೆ ಎಚ್ಚರಿಕೆ ವಹಿಸಬೇಕು. ಶಿಕ್ಷಕರಿಗೆ ವಿದ್ಯಾರ್ಥಿಗಳೆ ಅನ್ನದಾತರಾಗಿದ್ದು ಕಲಿಕಾ ಗುಣಮಟ್ಟ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೀವನಸಾಬ ವಾಲೇಕಾರ ಬಿನ್ನಾಳ ಮಾತನಾಡಿ, ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಮಹಿಳಾ ಅಸಮಾನತೆ ನಿವಾರಣೆಗೆ ಸಾವಿತ್ರಿಬಾಯಿ ಪುಲೆ ಹಾಗೂ ಜ್ಯೋತಿ ಬಾಪುಲೆ ನೀಡಿದ ಕೊಡುಗೆ ಅಪಾರ. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸೆಣಸಾಡಿದ ದೇಶದ ಮೊಟ್ಟ ಮೊದಲ ಸಾಮಾಜಿಕ ಹೋರಾಟಗಾರ್ತಿ ಎಂದು ಬಣ್ಣಿಸಿದರು. ಸಾವಿತ್ರಿಬಾಯಿ ಪುಲೆ, ಫಾತಿಮಾ ಶೇಖ್ ಇತರೆ ಸಾಧಕರು ಇಂದಿನ ಶಿಕ್ಷಕರಿಗೆ ಆದರ್ಶ ಹಾಗೂ ಸ್ಪೂರ್ತಿಯಾಗಿದ್ದಾರೆ, ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿರೂಪಾಕ್ಷಿ ಸ್ವಾಮಿ ಮಾತನಾಡಿ, ಸಮಾಜ ಹಾಗೂ ದೇಶದ ಅಭಿವೃದ್ದಿಯಲ್ಲಿ ಶಿಕ್ಷಣದ ಪಾತ್ರ ಹಿರಿದಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಣವು ಬದುಕಿನಲ್ಲಿ ಪ್ರಮುಖವಾಗಿದೆ ಎಂದು ತಿಳಿಸಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗಂ ಮಾತನಾಡಿ, ಸಂಘವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು 'ಸಂಘದ ನಡೆ ಶಾಲೆ ಕಡೆಗೆ', ನವೋದಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಹಾಗೂ ಉಚಿತ ಸ್ಪರ್ಧಾತ್ಮಕ ಪುಸ್ತಕ ವಿತರಣೆ ಸೇರಿ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್. ಬಸವರಾಜ, ಕುಷ್ಟಗಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ನಿಡಗುಂದಿ ಹಾಗೂ ಕೊಪ್ಪಳ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಸಲೀಂ ದಡೇದ, ಬಾಳಪ್ಪ ಕಾಳೆ, ಪಿಎಸ್ಐ ಲೋಕರಾಜ, ಶಿಕ್ಷಕರಾದ ಮಂಜುಳಾ ಶಾವಿ, ಸುಬ್ರಹ್ಮಣ್ಯ, ಶ್ರೀಧರ ಮಾತನಾಡಿದರು. ಇದೇ ವೇಳೆ ಸಂಘದಿಂದ ಹೊರತರಲಾದ ಸಂಚಲನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲ್ಲೂಕಿನ ವಿವಿಧ ಇಲಾಖೆಯ ನೌಕರರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಕ್ಷರ ದಾಸೋಹ ಅಧಿಕಾರಿ ಸುರೇಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಜಗದೀಶ ಹಾದಿಮನಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಸತೀಶ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡಿ.ಜಿ.ಸಂಗಮ್ಮನವರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲಕುಮಾರ, ಪ್ರಾಂಶುಪಾಲ ಎನ್. ಮಾರೆಪ್ಪ, ಕಾರಟಗಿ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಬಸಪ್ಪ ವಕ್ಕಳದ, ಶರಣಪ್ಪ ತುಮುರಿಕೊಪ್ಪಳ, ಅಹ್ಮದ ಹುಸೇನ, ಮಹೇಶ, ನಿವೃತ್ತ ಮುಖ್ಯಶಿಕ್ಷಕರು, ನೌಕರರು ಹಾಗೂ ಶಿಕ್ಷಕರ ಪ್ರತಿನಿಧಿಗಳು ಇದ್ದರು.
ಮಂಜುನಾಥ ಮಾಗಳದ ಸಂಗಡಿಗರು ಪ್ರಾರ್ಥಿಸಿದರು. ದುರಗಪ್ಪ ಸ್ವಾಗತಿಸಿದರು. ಶೇಖರ ನಾಯಕ್ ಹಾಗೂ ಪವಿತ್ರ ಮಂಜುನಾಥ ನಿರೂಪಿಸಿದರು. ಜಗದೀಶ ಟಿಎಸ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.