ಕೊಪ್ಪಳ: ‘ಓದುವ ಹವ್ಯಾಸವಿಲ್ಲದಿದ್ದರೆ ಬರವಣಿಗೆ ಕಷ್ಟಸಾಧ್ಯ. ಬರವಣಿಗೆಯ ಕೌಶಲಗಳನ್ನು ಅರಿತುಕೊಳ್ಳಲು ನಿರಂತರ ಅಧ್ಯಯನ ಅಗತ್ಯ‘ ಎಂದು ಪತ್ರಕರ್ತ ದೊಡ್ಡೇಶ್ ಯಲಿಗಾರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪತ್ರಿಕೋದ್ಯಮ ವಿಭಾಗದಿಂದ ಆಂತರಿಕ ಪ್ರಸಾರದ ಕಾಲೇಜು ರಂಗ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆಯ ಎರಡನೇ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ ‘ಪತ್ರಿಕೆಗಳನ್ನು ಓದದಿದ್ದರೆ ನಮ್ಮಷ್ಟಕ್ಕೆ ನಾವೇ ಆತ್ಮವಂಚನೆ ಮಾಡಿಕೊಂಡಂತೆ. ಆದ್ದರಿಂದ ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದರು.
‘ಮಾಧ್ಯಮಗಳ ಬಗ್ಗೆ ನಕಾರಾತ್ಮಕ ಭಾವನೆಗಳು ಬೇಕಿಲ್ಲ. ಏಕೆಂದರೆ ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ. ಸಮಾಜದ ಕಣ್ಣು ತೆರೆಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತವೆ. ಪತ್ರಿಕೆಗಳು ಸಮಾಜದ ಸ್ವಾಸ್ತ್ಯ ಕಾಪಾಡುತ್ತವೆ’ ಎಂದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಬಸವರಾಜ ಕರುಗಲ್, ಉಪನ್ಯಾಸಕರಾದ ವಿಜಯಕುಮಾರ್ ಕುಲಕರ್ಣಿ, ತಿಮ್ಮಾರೆಡ್ಡಿ ಮೇಟಿ, ಗಾಯತ್ರಿ ಭಾವಿಕಟ್ಟಿ, ಶಿವಣ್ಣ, ಪ್ರಕಾಶ ಬಳ್ಳಾರಿ ಮಾತನಾಡಿದರು. ಪ್ರಾಚಾರ್ಯ ಮಾರುತೇಶ್. ಬಿ. ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ಅಶ್ವಿನಿ ನಿರೂಪಿಸಿದರೆ, ಸ್ವಾತಿ ಮತ್ತು ಮಧುರಾ ಪ್ರಾರ್ಥಿಸಿದರು. ರವಿ ಸ್ವಾಗತಿಸಿದರು. ಪದ್ಮನಾಭ ವಂದಿಸಿದರು.