ತಾವರಗೇರಾ: ಸ್ಥಳೀಯ ಆರಾಧ್ಯ ದೈವ ಹಾಗೂ ಹಿಂದೂ ಮುಸ್ಲಿಂ ಸಮಾಜದ ಭಾವೈಕ್ಯದ ಶ್ಯಾಮೀದಲಿ ದರ್ಗಾ ಮತ್ತು ಹಜರತ್ ಸೈಯದ್ ಷಾ ಹಮಿದೋದ್ದಿನ್ ಖಾದ್ರಿ ರಹಮತುಲ್ಲಾ ಅಲೇಹ ಉರುಸ್ ಪಟ್ಟಣದಲ್ಲಿ ಶನಿವಾರ ವಿಜೃಂಭಣೆಯಿಂದ ಎಲ್ಲಾ ಸಮಾಜದ ನೇತೃತ್ವದಲ್ಲಿ ನಡೆಯಿತು.
ಶುಕ್ರವಾರ ಗಂಧ ಕಾರ್ಯಕ್ರಮ ನಡೆಸಲಾಯಿತು. ಶನಿವಾರ ದರ್ಗಾದಲ್ಲಿ ಮುತುವಲ್ಲಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು.
ದರ್ಗಾಕ್ಕೆ ಬಂದ ಭಕ್ತರು ಸಕ್ಕರೆ ನೈವೇಧ್ಯ ಸಲ್ಲಿಸಿದರು. ಇನ್ನೂ ಹರಕೆ ಹೊತ್ತ ಕೆಲವರು ದೀಡ್ ನಮಸ್ಕಾರ ಹಾಕಿದರು. ನೈವೈದ್ಯ ಸಲ್ಲಿಸುವ ಸಲುವಾಗಿ ಭಕ್ತರು ಸಾಲಾಗಿ ಬರಲು ವ್ಯವಸ್ಥೆ ಮಾಡಲಾಗಿತ್ತು.
ಸ್ಥಳೀಯ ವಿವಿಧ ಸಮಾಜದ ಬಂಧುಗಳು ಉರುಸ್ ಕಾರ್ಯಕ್ರಮಗಳ ಜವಾಬ್ದಾರಿ ತೆಗೆದುಕೊಂಡು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ, ಕುಡಿಯುವ ನೀರು, ದೀಪಾಲಂಕಾರ, ನೆರಳಿನ ವ್ಯವಸ್ಥೆ ಮಾಡಿದ್ದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ, ತಹಶೀಲ್ದಾರ್ ರವಿ ಎಸ್.ಅಂಗಡಿ ಮತ್ತು ಜನಪ್ರತಿನಿಧಿಗಳು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳು ಹಾಗೂ ಹೊರ ರಾಜ್ಯದ ಭಕ್ತರು ಭೇಟಿ ನೀಡಿ ದರ್ಶನ ಪಡೆದರು.
ಬಿಗಿ ಬಂದೋಬಸ್ತ್ ಕೊರತೆ: ಪಟ್ಟಣದಲ್ಲಿ ಲಕ್ಷಗಟ್ಟಲೆ ಭಕ್ತರು ಪಾಲ್ಗೊಳ್ಳುವ ಶ್ಯಾಮೀದಲಿ ದರ್ಗಾ ಉರುಸ್ನಲ್ಲಿ ಶನಿವಾರ ಜನರ ನಿಯಂತ್ರಣದ ಕರ್ತವ್ಯದಲ್ಲಿ ಪೊಲೀಸ್ ಸಿಬ್ಬಂದಿಗಳ ನಿರ್ಲಕ್ಷ್ಯ ಕಂಡು ಬಂದಿತು.
ವಾಹನಗಳು ಅಲ್ಲಲ್ಲಿ ನಿಂತಿದ್ದು, ಗದ್ದಲದ ನಡುವೆಯೂ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸದೇ ಪೋನಿನಲ್ಲಿ ಮಾತನಾಡುತ್ತಾ ಕಾಲ ಕಳೆಯುವುದನ್ನು ಕಂಡ ಭಕ್ತರು ಕೆಂಡಾ ಮಂಡಲವಾದರು. ದರ್ಗಾ ಆವರಣದಲ್ಲಿ ಕೇವಲ ಇಬ್ಬರು ಹಾಗೂ ಮೂವರು ಪೊಲೀಸರನ್ನು ನಿಯೋಜಿಸಲಾಗಿತ್ತು.
ತಾವರಗೇರಾ ಪಟ್ಟಣದಲ್ಲಿ ಶನಿವಾರ ನಡೆದ ಶ್ಯಾಮೀದಲಿ ದರ್ಗಾ ಉರುಸ್ನ ಅಂಗವಾಗಿ ಹಾಕಲಾಗಿದ್ದ ಅಂಬಾಜಿ ಕಲಾಲ ಮಿಠಾಯಿ ಅಂಗಡಿಯಲ್ಲಿ ಗಮನಸೆಳೆದ ಬ್ಯಾನರ್
ತಾವರಗೇರಾ ಪಟ್ಟಣದಲ್ಲಿ ಶನಿವಾರ ನಡೆದ ಶ್ಯಾಮೀದಲಿ ದರ್ಗಾ ಉರುಸ್ ವೇಳೆ ವಾಹನಗಳ ಸಂಚಾರ ದಟ್ಟಣೆ ಕಂಡು ಬಂದಿತು