ಕೊಪ್ಪಳ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರಿಂದ ಲಾಭ ಪಡೆದ ಹಲವಾರು ಶಾಸಕರು ಹಾಗೂ ಸಚಿವರು ಕೆಜೆಪಿ ಸೇರುತ್ತೇವೆ ಎಂದು ಭರವಸೆ ನೀಡಿ ನಂತರ ಕೈಕೊಡುವ ಮೂಲಕ ದ್ರೋಹ ಬಗೆದರು. ಅಂಥವರಲ್ಲಿ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಸಹ ಒಬ್ಬರು.
ಅವರು ನಂಬಿಕೆಗೆ ಅರ್ಹರಲ್ಲ ಎಂದು ಮಾಜಿ ಸಚಿವೆ ಹಾಗೂ ಕೆಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದರು. ಸಮೀಪದ ಭಾಗ್ಯನಗರದ ಖೋಡೆ ಕಲ್ಯಾಣ ಮಂಟಪದಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಕೆ.ಎಂ.ಸೈಯದ್ ಪರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನೇಕ ಜನ ಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬೇರೆ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಗಳನ್ನು ಕೈಬಿಡುತ್ತಾರೆ.
ಹೀಗಾಗಿ ರಾಜ್ಯದ ಜನ ಕೆಜೆಪಿಗೆ ಅಧಿಕಾರ ನೀಡಿದರೆ ಈ ಎಲ್ಲಾ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ತಿಳಿಸಿದರು.
ಕೆಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದೂ ಭರವಸೆ ನೀಡಿದರು.
ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ, ಅಭ್ಯರ್ಥಿ ಕೆ.ಎಂ.ಸೈಯದ್ ಮಾತನಾಡಿದರು. ಗಂಗಾವತಿ ಅಭ್ಯರ್ಥಿ ಬಸವರಾಜ ಪಾಟೀಲ್ ಅನ್ವರಿ, ಅಜ್ಜು ಖಾದ್ರಿ, ಪ್ರಫುಲ್ಲಗೌಡ ಹುರಕಡ್ಲಿ ಇತರರು ಇದ್ದರು.