ಕಾಳಗಿ: ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಹಲವು ಕ್ಷೇತ್ರಗಳ ಸೌಲಭ್ಯ ಪಡೆಯಲು ಹೋರಾಟ ಮಾಡುವುದು ಬಹುಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎನ್.ಧರ್ಮಸಿಂಗ್ ಅಭಿಪ್ರಾಯಪಟ್ಟರು.
ಕೋಲಿ (ಕಬ್ಬಲಿಗ) ಸಮಾಜ ಜನಜಾಗೃತಿ ಸಮಿತಿ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕೋಲಿ ಸಮಾಜದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆ ಸೇರಿದ ಕೋಲಿ ಸಮಾಜದ ಅಭಿವೃದ್ಧಿಗೆ ದಿವಂಗತ ಡಿ.ದೇವರಾಜ ಅರಸ್ ನೇತೃತ್ವದ ಸರ್ಕಾರ ತುಂಬ ಕಾಳಜಿ ವಹಿಸಿತ್ತು.
ಅದರಂತೆ ವೀರಪ್ಪ ಮೊಯಿಲಿ ಸಮ್ಮುಖದ ಸರ್ಕಾರ ಪ್ರವರ್ಗ-1ಕ್ಕೆ ಸೇರಿಸುವ ಕೆಲಸ ಮಾಡಿ ಕೋಲಿ ಸಮಾಜದ ಉನ್ನತಿಗೆ ಶ್ರಮಿಸಿದೆ ಎಂದರು. ಇನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಬಯಸುವ ಕೋಲಿ ಜನಾಂಗದ ಪ್ರಯತ್ನಕ್ಕೆ ಮಹತ್ವದ ಹೋರಾಟ ನಡೆಯಬೇಕಿದೆ. ಈ ಸಂದರ್ಭದಲ್ಲಿ ಬೇಕಾಗುವ ಎಲ್ಲ ರೀತಿಯ ಬೆಂಬಲ ನೀಡುತ್ತೇನೆ. ಸದ್ಯದ ಅವಧಿಯಲ್ಲಿ ಈ ಜನಾಂಗಕ್ಕೆ ನೀಡಬೇಕಾದ ಸೌಲಭ್ಯಗಳು ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಶಾಸಕ ಸುನೀಲ ವಲ್ಯ್ಪುರ ಮಾತನಾಡಿ, ಕೋಲಿ ಸಮಾಜದ ಜನರು ಧೈರ್ಯಶಾಲಿಗಳಾಗಿದ್ದು, ಇತರ ಸಮಾಜಕ್ಕೆ ಉಪಕಾರ ಮಾಡಿ ಸಹಕರಿಸಿದ ಜನತೆ ಇವರಾಗಿದ್ದಾರೆ ಎಂದು ಬಣ್ಣಿಸಿದರು.
ಗುರುಮಠಕಲ್ ಶಾಸಕ ಬಾಬುರಾವ ಚಿಂಚನಸೂರ ಮಾತನಾಡುತ್ತ, ಕೋಲಿ ಸಮಾಜದ ಜನ ಒಳ್ಳೆಯ ವಿಚಾರವಂತರಾಗಿ ಇತರರೊಂದಿಗೆ ಸಹೋದರತ್ವ ಭಾವನೆ ಕಾಣಬೇಕು. ಈ ಜನಾಂಗದ ಅಭಿವೃದ್ಧಿಗೋಷ್ಕರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿಯೇ ತೀರುತ್ತೇನೆ ಎಂದು ನುಡಿದರು.
ಸಾನಿಧ್ಯ ವಹಿಸಿದ್ದ ತೊನಸನಳ್ಳಿ ಅಲ್ಲಂಪ್ರಭು ಪೀಠದ ಪೂಜ್ಯ ಮಲ್ಲಣ್ಣಪ್ಪ ಅಪ್ಪ, ಅಧ್ಯಕ್ಷತೆ ವಹಿಸಿಕೊಂಡಿದ್ದ ಆಂಧ್ರಪ್ರದೇಶದ ಮಾಜಿಮಂತ್ರಿ ಎಂ.ಮಾಣಿಕರಾವ, ಸಮಾಜದ ರಾಜ್ಯ ಉಪಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಕಾಡಾ ಅಧ್ಯಕ್ಷ ಗಿರೀಶ್ ಮಟ್ಟೆಣ್ಣವರ್ ಮಾತನಾಡಿದರು.
ಮಾಜಿ ಮುಖ್ಯಸಚೇತಕ ವಿಠ್ಠಲ ಹೇರೂರ ಧ್ವಜಾರೋಹಣ ನೆರವೇರಿಸಿದರು. ಪೂಜ್ಯ ಗಂಗಾಧರ ಮಹಾಸ್ವಾಮೀಜಿ, ಪೂಜ್ಯ ರೇವಣಸಿದ್ಧ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ, ಶಾಸಕ ವಾಲ್ಮೀಕ ನಾಯಕ್, ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಗಾಜರೆ, ಜಿ.ಪಂ.ಸದಸ್ಯ ಶಂಭುಲಿಂಗ ಗುಂಡಗುರ್ತಿ, ಮುಖಂಡ ಕಾಮಣಪ್ಪ ವಚ್ಚಾ, ಭೀಮಣ್ಣ ಸಾಲಿ, ನರೇಶ ಮಲ್ಕೂಡ, ನ್ಯಾಯವಾದಿ ದಶರಥ ನಾಮದಾರ, ರಾಜಗೋಪಾಲರೆಡ್ಡಿ, ರವಿರಾಜ ಕೊರವಿ, ಸಿದ್ರಾಮಪ್ಪ ಐರೆಡ್ಡಿ, ಎನ್ಸಿವಿಟಿ ಸದಸ್ಯ ಜಗದೇವ ಗುತ್ತೇದಾರ, ಡಾ.ಉಮೇಶ ಜಾಧವ, ಲಕ್ಷ್ಮಣ ಅವಂಟಿ, ಡಾ.ಭೀಮರಾಯ ಅರಕೇರಿ, ರಾಮಚಂದ್ರಪ್ಪ ನಾಮದಾರ, ಶೀಲಾಬಾಯಿ ಜಾಧವ, ಶರಣಪ್ಪ ಸಂಗಾವಿ, ಸಿದ್ಧಣ್ಣ ಜಮಾದಾರ, ಚಂದ್ರಕಾಂತ ಜಾಧವ, ರೇವಣಸಿದ್ಧಪ್ಪ ಸಾತನೂರ, ಝರಣಪ್ಪ ಚಿಂಚೋಳಿ, ಮಲ್ಲಿಕಾರ್ಜುನ ಎಮ್ಮೆನೋರ, ಶಿವಮಂದ್ರಪ್ಪ ಸಣ್ಣೂರಕರ್, ಸುರೇಶ ಹುಡಗಿ, ಬಾಬುರಾವ ಭೋವಿ ಅನೇಕ ಗಣ್ಯರು ವೇದಿಕೆಯಲ್ಲಿದ್ದರು.
ಕಾವೇರಿ ಇವಣಿ ಪ್ರಾರ್ಥಿಸಿದಳು. ಪೃಥ್ವಿರಾಜ ನಾಮದಾರ ಸ್ವಾಗತಿಸಿದರು. ಸಿದ್ಧಣ್ಣ ಮುಕರಂಬಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.