ಮುನಿರಾಬಾದ್: ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಅನ್ನು ಸಮೀಪದ ಹಿಟ್ನಾಳ ಗ್ರಾಮದ ನಾಡಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಪ್ರಾಸ್ತಾವಿಕ ಮಾತನಾಡಿದ ಗ್ರಾಮ ಲಿಕ್ಕಾಧಿಕಾರಿ ಮಂಜುನಾಥ, ನಾಡಕಚೇರಿಯಲ್ಲಿ (ಅಟಲ್ಜೀ ಜನಸ್ನೇಹಿ ಕೇಂದ್ರ) ಸಾರ್ವಜನಿಕರಿಗೆ ದೊರೆಯುವ ಸೌಕರ್ಯಗಳು ಮತ್ತು ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ವಿಧವಾ ವೇತನ ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ನಾಡಕಚೇರಿಯ ಉಪತಹಶೀಲ್ದಾರ್ ಮುರಳೀಧರ ಮುಕ್ತೇದಾರ ಮಾತನಾಡಿ, ಮಂಜೂರಾತಿ ಅದೇಶ ಪಡೆದಿದ್ದು ಪಿಂಚಣಿ ವಿತರಣೆ ಆಗದೇ ಇರುವ ಕುರಿತು, ಜನಸ್ನೇಹಿ ಕೇಂದ್ರಗಳಲ್ಲಿ ಸ್ವೀಕರಿಸಿದ ಅರ್ಜಿ ವಿಲೇವಾರಿ ಆಗದ, ಪಿಂಚಣಿಗೆ ಸಂಬಂಧಿಸಿದಂತೆ ಇತರ ಸಮಸ್ಯೆಗಳಿದ್ದಲ್ಲಿ ಅದಾಲತ್ನಲ್ಲಿ ಕೇಳಬಹುದು ಎಂದರು.
ತಹಶೀಲ್ದಾರ್ ಚಂದ್ರಕಾಂತ ಮಾಲಗಿತ್ತಿ, ಅದಾಲತ್ನಲ್ಲಿ ಭಾಗವಹಿಸಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಆದ್ಯತೆಯ ಮೇಲೆ ಪರಿಹರಿಸುವಂತೆ ಅಧೀನ ಸಿಬ್ಬಂದಿಗೆ ಸೂಚಿಸಿದರು.
ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಾತಿ ಆದೇಶ ಪತ್ರ ನೀಡಿದರು. ಶಿರಸ್ತೇದಾರರಾದ ಸೋಫಿಯಾ ಬೇಗಮ್, ಕಂದಾಯ ನಿರೀಕ್ಷಕ ಬಾಲಚಂದ್ರ ಹಲಗೇರಿ ಮತ್ತು ಹಿಟ್ನಾಳ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಲಿಕ್ಕಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.