ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಸಮೀಪ ಕಾರು ಮತ್ತು ಸ್ಕೂಟರ್ ನಡುವೆ ಭಾನುವಾರ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಶಿಕ್ಷಕಿಯರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಬಸ್ತಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಾಗರತ್ನ (50) ಮತ್ತು ಪಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಮಂಜುಳಾ (45) ಮೃತಪಟ್ಟವರು. ನಾಗರತ್ನ ಸ್ಥಳದಲ್ಲೇ ಮೃತಪಟ್ಟಿದ್ದು, ಮಂಜುಳಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗರತ್ನ ಮತ್ತು ಮಂಜುಳಾ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಕರ್ತವ್ಯ ಮುಗಿಸಿ ಆಕ್ಟಿವ್ ಹೋಂಡಾ ಸ್ಕೂಟರ್ನಲ್ಲಿ ಮೈಸೂರು ಕಡೆ ತೆರಳುತ್ತಿದ್ದರು. ಪಾಲಹಳ್ಳಿ ಕಡೆಯಿಂದ ಪಟ್ಟಣದ ಕಡೆ ಬರುತ್ತಿದ್ದ ಬ್ರೆಜ್ಜಾ ಕಾರು ಡಿಕ್ಕಿ ಹೊಡೆದಿದೆ. ಕಾರಿನ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಸ್ತಿಪುರ ಶಾಲೆಯ ಶಿಕ್ಷಕಿ ನಾಗರತ್ನ ಮೂಲತಃ ಕೆ.ಆರ್. ನಗರದವರಾಗಿದ್ದು, ಬಸ್ತಿಪುರದಲ್ಲೇ ವಾಸವಾಗಿದ್ದರು. ಪಿ.ಹೊಸಹಳ್ಳಿ ಶಾಲೆಯ ಶಿಕ್ಷಕಿ ಮಂಜುಳಾ ಪಾಂಡವಪುರ ತಾಲ್ಲೂಕಿನ ಹಿರೀಮರಳಿ ಗ್ರಾಮದವರಾಗಿದ್ದು, ಕುಟುಂಬದ ಜತೆ ಮೈಸೂರಿನ ಮೇಟಗಹಳ್ಳಿಯಲ್ಲಿ ವಾಸವಾಗಿದ್ದರು.
ಕಾರಿನ ಚಾಲಕನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.