ಹಲಗೂರು: ಕಡವೆಯನ್ನು ಬೇಟೆಯಾಡಿ, ಮಾಂಸವನ್ನು ಸಾಗಿಸುತ್ತಿದ್ದ ಬಸವನಹಳ್ಳಿ ಗ್ರಾಮದ ಪ್ರಕಾಶ್ ಎಂಬಾತನನ್ನು ಅರಣ್ಯ ಇಲಾಖೆ ಬಂಧಿಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಬಸವನಬೆಟ್ಟ ಅರಣ್ಯ ಪ್ರದೇಶದ ನೀರಳ್ಳದ ಕೆರೆಗೆ ಹೋಗುವ ಮಾರ್ಗದಲ್ಲಿ ಸಿಬ್ಬಂದಿ ಗಸ್ತು ಮಾಡುತ್ತಿದ್ದಾಗ ರಸ್ತೆಯ ಸಮೀಪದಲ್ಲಿ ಸ್ಕೂಟರ್ ನಿಲ್ಲಿಸಿದನ್ನು ಗಮನಿಸಿದ್ದಾರೆ. ಸಿಬ್ಬಂದಿ ಅರಣ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದಾಗ ಅನುಮಾನಸ್ಪದವಾಗಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಹಿಡಿದು ಓಡಾಡುತ್ತಿದ್ದ ಪ್ರಕಾಶ್ ಕಾಣಿಸಿಕೊಂಡಿದ್ದಾನೆ. ಸಿಬ್ಬಂದಿ ವಿಚಾರಿಸಿದಾಗ ಬಸವನಹಳ್ಳಿ ಗ್ರಾಮದ ಸಿದ್ದಪ್ಪ, ಶಿವರಾಮ, ಕೆಂಪ, ಮಹದೇವು ಜತೆಗೂಡಿ ಕಡವೆ ಬೇಟೆ ಮಾಡಿ ಮಾಂಸ ಹಂಚಿಕೊಂಡಿದ್ದು, ನನ್ನ ಪಾಲಿನ ಮಾಂಸ ಕೊಂಡೊಯ್ಯುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪ್ರಕಾಶ್ ಅನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಉಳಿದ ನಾಲ್ವರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕಾವೇರಿ ವನ್ಯಜೀವಿ ವಲಯದ ಕನಕಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ನಾಗೇಂದ್ರ ಪ್ರಸಾದ್ ಮಾತನಾಡಿ, ‘10 ವರ್ಷದ ಹೆಣ್ಣು ಕಡವೆಗೆ ಉರುಳು ಹಾಕಿ ಕೊಂದಿದ್ದು, ಕಡವೆ ಚರ್ಮ ಮತ್ತು ಮಾಂಸ ವಶಪಡಿಸಿಕೊಳ್ಳಲಾಗಿದೆ. ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಕಾವೇರಿ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ರವಿ ಬುರ್ಜಿ, ಉಪವಲಯ ಅರಣ್ಯ ಅಧಿಕಾರಿ ಪ್ರವೀಣ್ ಕುಮಾರ್, ಅರಣ್ಯ ಪಾಲಕ ಪ್ರಕಾಶ್, ಸಿದ್ದರಾಮ ಪೂಜಾರಿ, ಸಿಬ್ಬಂದಿ ಶಿವಣ್ಣ, ವೆಂಕಟೇಶ್, ಪಡಿಯಪ್ಪ, ಜೀಪ್ ಚಾಲಕ ಬಾಲರಾಜು ಪಾಲ್ಗೊಂಡಿದ್ದರು.