ಮಂಡ್ಯ: ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸರದಿ ಉಪವಾಸಕ್ಕೆ ಮಂಗಳವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅಭಿಮಾನಿ ಬಳಗ ಬೆಂಬಲ ಸೂಚಿಸಿ ಪಾಲ್ಗೊಂಡಿತು. ರೈತ ಮುಖಂಡ ಕುರಬೂರು ಶಾಂತಕುಮಾರ್ ಸಹ ತಮ್ಮ ಬೆಂಬಲಿಗರೊಂದಿಗೆ ಪಾಲ್ಗೊಂಡರು.
ನಗರದ ಸರ್ ಎಂ.ವಿ. ಪ್ರತಿಮೆ ಎದುರು ಸರದಿ ಉಪವಾಸದಲ್ಲಿ ಬಳಗದ ತಗ್ಗಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಲಿಂಗಣ್ಣ, ಅರಕೆರೆ ಸಚಿನ್, ತಗ್ಗಳ್ಳಿಯ ಟಿ.ಎಸ್. ಸಿದ್ದರಾಜು, ಮಂಜು,ಚೀರನಹಳ್ಳಿ ದರ್ಶನ್, ಸಂತೆ ಕಸಲಗೆರೆ ಗ್ರಾಮದ ಶಿವಕುಮಾರ್, ದೇವೇಗೌಡ, ಚಂದ್ರಶೇಖರ್ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
ಉಪವಾಸ ಬೆಂಬಲಿಸಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘ರಾಜ್ಯದಲ್ಲಿ ದುರುಳ ಸರ್ಕಾರ ಆಡಳಿತ ಮಾಡುತ್ತಿದ್ದು ಇವರಿಂದ ಒಳ್ಳೆಯ ಪ್ರತಿಫಲ ಸಿಗುವುದಿಲ್ಲ. ಕಾವೇರಿ ನದಿ ನೀರಿನ ವಿಚಾರದಲ್ಲಿ ಶಾಂತಿಯುತ ಹೋರಾಟದ ಜೊತೆಗೆ ಉಗ್ರವಾದ ಹೋರಾಟ ಮಾಡಬೇಕಾಗಿದೆ’ ಎಂದರು.
ಕೆಟ್ಟವರನ್ನು ಗೆಲ್ಲಿಸಿ ಒಳ್ಳೆಯದನ್ನು ಬಯಸಿದರೆ ಹೇಗೆ? ಒಳ್ಳೆಯವರು ಗೆದ್ದಿದ್ದರೆ, ಒಳ್ಳೆಯ ಆಡಳಿತ ದೊರಕುತ್ತಿತ್ತು. ಶಾಸಕರು ಮಂತ್ರಿಗಳು ಸ್ವಾರ್ಥಿಗಳಾಗಿದ್ದು, ಮಂತ್ರಿಯಾಗಿರುವವರು ತಮ್ಮ ಸಹಾಯಕರನ್ನು ಕಚೇರಿಯಲ್ಲಿ ಬಿಟ್ಟು, ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಇಂಥವರಿಂದ ಯಾವುದೇ ಪ್ರತಿಫಲ ಸಿಗದು ಎಂದರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್ ,ಎಸ್ ನಾರಾಯಣ, ಶಿವರತ್ನಮ್ಮ ಇದ್ದರು.