ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಹೋಬಳಿ ಚುಜ್ಜಲ ಕ್ಯಾತನಹಳ್ಳಿ ಗ್ರಾಮದ ತೆಂಗಿನ ಘಟ್ಟ ಗೇಟ್ನಲ್ಲಿ ತೋಪೇಗೌಡ ಎಂಬುವವರ ಕೊಲೆ ಮಾಡಿದ್ದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ₹25 ಸಾವಿರ ದಂಡ ವಿಧಿಸಿ ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶರಾದ ಗೋಪಾಲ ಕೃಷ್ಣ ರೈ ತೀರ್ಪುನೀಡಿದ್ದಾರೆ.
ಆರೋಪಿಗಳಾದ ತೆಂಗಿನಘಟ್ಟ ಗ್ರಾಮದ ಬಲರಾಮ, ಚುಜ್ಜಲ ಕ್ಯಾತನಹಳ್ಳಿ ಗ್ರಾಮದ ಸ್ವಾಮಿ ಎಂಬುವವರು ಚುಜ್ಜಲ ಕ್ಯಾತನಹಳ್ಳಿ ಗ್ರಾಮದ ತೆಂಗಿನ ಘಟ್ಟ ಗೇಟ್ ನಲ್ಲಿ ತೋಪೇಗೌಡ ಎಂಬುವವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು 2015ರ ಜನವರಿ 19ರಂದು ದೂರು ದಾಖಲಾಗಿತ್ತು.
ನಾಗಮಂಗಲ ಡಿವೈಎಸ್ ಪಿ ಸವಿತಾ ಹೂಗಾರ ನೇತೃತ್ವದಲ್ಲಿ ಕೆ. ಆರ್.ಪೇಟೆ ಸರ್ಕಲ್ ಇನ್ಸಪೆಕ್ಟರ್ ರಾಜೇಂದ್ರ ತನಿಖೆ ನಡೆಸಿದ್ದರು. ಎಎಸ್.ಐ ಸೋಮಶೇಖರ್, ಪಿ.ಶಿವಣ್ಣ, ಕೆ.ಕೆ.ಕುಮಾರ ಮತ್ತು ಇತರ ಸಿಬ್ಬಂದಿ ಸಹಾಯದೊಂದಿಗೆ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕಿ ಎಂ.ಕೆ. ಪ್ರಪುಲ್ಲಾ ಅರ್ಜಿದಾರರ ಪರ ವಾದ ಮಂಡಿಸಿದ್ದರು.