ಶ್ರೀರಂಗಪಟ್ಟಣ: ತಾಲ್ಲೂಕಿನ ನೆಲಮನೆ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಬೆಂಕಿ ಆಕಸ್ಮಿಕದಿಂದಾಗಿ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಹೋಗಿದೆ.
ನೆಲಮನೆ ಗ್ರಾಮದ ಎನ್.ಸಿ. ಕೃಷ್ಣೇಗೌಡ ಅವರಿಗೆ ಸೇರಿದ ಒಂದೂವರೆ ಎಕರೆ ಮತ್ತು ಲಕ್ಷ್ಮೀನರಸಿಂಹ ಅವರು ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಹೋಗಿದೆ. ಈ ಪೈಕಿ ಎನ್.ಸಿ. ಕೃಷ್ಣೇಗೌಡ ಅವರ ಕಬ್ಬು ಬೆಳೆ ಇನ್ನು ಎರಡು ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು ಎಂದು ಗ್ರಾ.ಪಂ. ಸದಸ್ಯ ಎನ್.ಸಿ. ಪ್ರಭಾಕರ್ ತಿಳಿಸಿದ್ದಾರೆ.
ರೈಲ್ವೆ ಹಳಿಯ ಪಕ್ಕದಲ್ಲಿರುವ ಕಬ್ಬು ಬೆಳೆ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲು ಆಸುಪಾಸಿನ ಜಮೀನುಗಳ ರೈತರು ವಿಫಲ ಯತ್ನ ನಡೆಸಿದರು. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ತಿಳಿದು ಬಂದಿಲ್ಲ ಎಂದು ರೈತರು ಹೇಳಿದ್ದಾರೆ.