ನಾಗಮಂಗಲ (ಮಂಡ್ಯ ಜಿಲ್ಲೆ): ಪಟ್ಟಣದ ಒಳಚರಂಡಿ, ತೆರೆದ ಚರಂಡಿ ತ್ಯಾಜ್ಯ ಹಿರಿಕೆರೆಗೆ ಹರಿಯುತ್ತಿರುವ ಕಾರಣ ನೀರು ಕಲುಷಿತಗೊಂಡು ಸಾವಿರಾರು ಮೀನುಗಳು ಸಾವಿಗೀಡಾಗಿವೆ.
ಬರಗಾಲದ ಕಾರಣ ಕೆರೆಯಲ್ಲಿ ನೀರು ಕಡಿಮೆಯಾಗಿದ್ದು ತ್ಯಾಜ್ಯವೇ ಹೆಚ್ಚುತ್ತಿರುವ ಕಾರಣ ನೀರು ಕಲುಷಿತಗೊಂಡಿದೆ. ಕೆರೆಯ ನೀರು ಹಸಿರು ಬಣ್ಣಕ್ಕೆ ತಿರಿಗಿದ್ದು, ಜಾನುವಾರು ಕುಡಿಯಲೂ ಅಯೋಗ್ಯವಾಗಿದೆ. ವಾರದಿಂದೀಚೆಗೆ ಸಾವಿರಾರು ಮೀನು ಮೃತಪಟ್ಟಿದ್ದು ಕೆರೆಯಲ್ಲಿ ತೇಲುತ್ತಿವೆ.
ಸತ್ತ ಮೀನು ತಿನ್ನಲು ಹದ್ದುಗಳು ಹಾರಾಡುತ್ತಿರುವ ದೃಶ್ಯ ಸಾಮಾನ್ಯವಾಗಿವೆ. ಕೆರೆಯ ವ್ಯಾಪ್ತಿಯಲ್ಲಿ ದುರ್ವಾಸನೆ ಬೀರುತ್ತಿದೆ.
ಹಿರಿಕೆರೆಯಲ್ಲಿ ಮೀನು ಸಾಕಣೆಗೆ ಗಂಗಾಪರಮೇಶ್ವರಿ ಸಂಘವು ಗುತ್ತಿಗೆ ಪಡೆದಿದೆ. ಮೀನು ಸತ್ತಿರುವ ಕಾರಣ ಸಂಘಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಉಷ್ಣಾಂಶ ತೀವ್ರಗತಿಯಲ್ಲಿ ಏರಿಕೆಯಾಗಿರುವ ಕಾರಣದಿಂದಲೂ ಮೀನುಗಳು ಸಾಯುತ್ತಿವೆ ಎಂದು ಮೀನುಗಾರರು ಹೇಳುತ್ತಾರೆ.
‘ಮೀನುಗಳ ರಕ್ಷಣೆಗಾಗಿ ರಾಸಾಯನಿಕ ಸಿಂಪಡಿಸಿ ಕೆರೆ ನೀರನ್ನು ಶುದ್ಧಗೊಳಿಸಲಾಗುತ್ತಿದೆ. ಆದರೂ ಮೀನುಗಳು ಸಾಯುತ್ತಿರುವುದು ನೋವು ತರಿಸಿದೆ’ ಎಂದು ಮೀನುಗಾರರಾದ ದೊಡ್ಡಯ್ಯ, ಕೆಂಪರಾಜು ತಿಳಿಸಿದರು.
‘ಕೆರೆಯು ಹೇಮಾವತಿ ನೀರಾವರಿ ನಿಗಮದ ಅಡಿ ಬರುತ್ತದೆ. ಹೀಗಾಗಿ ನಿಗಮದ ಅಧಿಕಾರಿಗಳೇ ಕೆರೆ ಸ್ವಚ್ಛತೆಗೆ ಕ್ರಮ ವಹಿಸಬೇಕು’ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರು.
ನಾಗಮಂಗಲ ಪಟ್ಟಣದ ವ್ಯಾಪ್ತಿಯ ಸಾರೀಮೇಗಲ ಕೊಪ್ಪಲಿನ ಬಳಿ ತ್ಯಾಜ್ಯಯುಕ್ತ ಚರಂಡಿ ನೀರು ಕೆರೆಗೆ ಸೇರುತ್ತಿರುವುದು.