ಪಾಂಡವಪುರ: ಬಿಇಒ ಕಚೇರಿಯ ದ್ವೀತಿಯ ದರ್ಜೆ ಸಹಾಯಕ ವೆಂಕಟೇಶ್ ನಿವೃತ್ತ ಶಿಕ್ಷಕ ಸುರೇಶ್ ಬಾಬು ಅವರ ಬಳಿ ಶುಕ್ರವಾರ ₹ 12 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
ತಾಲ್ಲೂಕಿನ ಚಿನಕುರಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸುರೇಶ್ ಬಾಬು 2022ರಲ್ಲಿ ನಿವೃತ್ತರಾಗಿದ್ದರು. ಒಂದೂವರೆ ವರ್ಷ ಕಳೆದರೂ ಸರ್ಕಾರದಿಂದ ದೊರೆಯಬೇಕಿದ್ದ ಸೌಲಭ್ಯ ಪಡೆಯಲು ಎರಡು ತಿಂಗಳಿನಿಂದ ಬಿಇಒ ಕಚೇರಿಗೆ ಅಲೆಯುತ್ತಿದ್ದರು.
‘ಎರಡು ತಿಂಗಳ ಹಿಂದೆಯೂ ₹ 30ಸಾವಿರವನ್ನು ಪೋನ್ ಪೇ ಮೂಲಕ ವರ್ಗಾಯಿಸಿದ್ದರು. ಆದರೂ ವೆಂಕಟೇಶ್ ₹ 12ಸಾವಿರ ಲಂಚಕ್ಕೆ ಆಗ್ರಹಿಸಿದ್ದರು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಗಂಣದ ಸಮೀಪದ ಟೀ ಸ್ಟಾಲ್ ಬಳಿ ಹಣ ಪಡೆಯುವಾಗ ವೆಂಕಟೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರಕರಣ ದಾಖಲಾಗಿದೆ.