ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ– ದರ್ಶನ್‌ ಪುಟ್ಟಣ್ಣಯ್ಯ

Published 24 ಫೆಬ್ರುವರಿ 2024, 20:51 IST
Last Updated 24 ಫೆಬ್ರುವರಿ 2024, 20:51 IST
ಅಕ್ಷರ ಗಾತ್ರ

ಮಂಡ್ಯ: ‘ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ. ಈ ವಿಷಯದಲ್ಲಿ ಮೂಡಿರುವ ಗೊಂದಲ ವೈಭವೀಕರಿಸುವ ಅಗತ್ಯವಿಲ್ಲ’ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

‘ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಕಾಲದಿಂದಲೂ ಕಾಂಗ್ರೆಸ್‌ ಪಕ್ಷ ನಮಗೆ ಬೆಂಬಲವಾಗಿ ನಿಂತಿದೆ. ಸಹಜವಾಗಿಯೇ ನಾನು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇನೆ. ಇದರಲ್ಲಿ ಅನುಮಾನ ಬೇಡ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮತಕ್ಕಾಗಿ ಯಾರೂ ಹಣ ಸೇರಿದಂತೆ ಯಾವುದೇ ಆಮಿಷ ನೀಡಿಲ್ಲ; ಒತ್ತಡ ಹೇರಿಲ್ಲ. ಕೆಲವರು ಮನವಿ ಮಾಡಿರುವುದು ನಿಜ. ಆದರೆ, ಅದು ಬೆದರಿಕೆಯಲ್ಲ. ನಮ್ಮ ರಕ್ಷಣೆ ದೃಷ್ಟಿಯಿಂದ ಮಂಡ್ಯ ಶಾಸಕರು ಪೊಲೀಸರಿಗೆ ದೂರು ನೀಡಿರಬಹುದು’ ಎಂದು ಪ್ರತಿಕ್ರಿಯಿಸಿದರು.

‘ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ರೈತರು ಕಾರು, ಟ್ರಾಕ್ಟರ್ ಇಟ್ಟು ಕೊಂಡಿರುವುದನ್ನೂ ಟೀಕೆ ಮಾಡಲಾಗುತ್ತಿದೆ. ರೈತರು ಕಾರು ಖರೀದಿಸಲು ಶಕ್ತರಾಗಬಾರದೇ?‘ ಎಂದು ಪ್ರಶ್ನಿಸಿದರು. 

ರೈತ ಸಂಘದ ನಿರ್ಧಾರಕ್ಕೆ ಬದ್ಧ: ‘ಬೇಬಿಬೆಟ್ಟದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವ ಸಂಬಂಧ ರೈತಸಂಘ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಕೈಕುಳಿ ಕಾರ್ಮಿಕರು ಸಣ್ಣ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಪರೀಕ್ಷಾರ್ಥ ಸ್ಫೋಟದ ಅಗತ್ಯವಿದೆ ಎಂದು ಹಿಂದೆ ಹೇಳಿದ್ದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT