ನಾಗಮಂಗಲ: ‘ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ಕೇಳಿದ್ದೆವು. ವೈದ್ಯರು ದೇವರಿಗೆ ಸಮ ಎನ್ನುವುದನ್ನು ಕೋವಿಡ್ ಸಾಬೀತುಪಡಿಸಿದೆ’ ಎಂದು ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾ ನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಕಾಲೇಜಿನ ವತಿಯಿಂದ ಶನಿವಾರ ಆಯೋಜಿಸಿದ್ದ ಕೋವಿಡ್ ವಾರಿಯರ್ಗಳಾಗಿ ಕಾರ್ಯನಿರ್ವಹಿ ಸುತ್ತಿರುವ ಹಿರಿಯ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾ ಸೋಂಕಿನ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಕಾಲೇಜನ್ನು ಮರೆಯದೆ ಸಮಾಜ ಸೇವೆಯಲ್ಲಿ ತೊಡಗುವ ಮೂಲಕ ಅಸಹಾಯಕರಿಗೆ ನೆರವಾಗಿ.ಸೇವಾ ಜೀವನವೇ ದೊಡ್ಡ ವೃತ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಮಹೇಂದ್ರ, ವ್ಯಾಸಂಗ ಮಾಡಿದ ದಿನಗಳಿಗೂ ಇಂದಿಗೂ ಆಗಿರುವ ಬದಲಾವಣೆಗಳನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಸಂಸ್ಥೆ ಬಹಳಷ್ಟು ಅಭಿವೃದ್ಧಿಯಾಗಿದೆ. ಆದಿಚುಂಚನಗಿರಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾ ರ್ಥಿಗಳು ಕೇವಲ ಪ್ರತಿಭಾವಂತರು ಮಾತ್ರವಲ್ಲದೆ ಹೃದಯವಂತರೂ ಆಗಿದ್ದಾರೆ ಎಂದರು.
ಸಂಘದ ಕಾರ್ಯದರ್ಶಿ ಡಾ.ರವಿ ಕೃಷ್ಣಪ್ಪ ಅವರು ಸಂಘದ ಧೇಯೋದ್ದೇಶ ಕುರಿತು ವಿವರಿಸಿದರು.
ಕೋವಿಡ್ ವಾರಿಯರ್ಗಳ ಸೇವೆಯ ಕುರಿತ ವಿಡಿಯೊ ಪ್ರದರ್ಶಿಸಲಾಯಿತು. ಕಾಲೇಜು ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಹಿರಿಯ ವಿದ್ಯಾರ್ಥಿ ಮಾಲೂರು ಟಿಎಚ್ಒ ಡಾ.ಚನ್ನಕೇಶವ ಅವರು ಮರಣಾನಂತರ ದೇಹವನ್ನು ಕಾಲೇಜಿಗೆ ಕೊಡುವುದಾಗಿ ಕಾರ್ಯಕ್ರಮದಲ್ಲಿ ಘೋಷಿಸಿದರು.
ಕಾಲೇಜು ಪ್ರಾರಂಭವಾದಾಗಿನಿಂದ ಪ್ರತಿ ವರ್ಷ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಡಾ.ಎಂ.ಜಿ. ಶಿವರಾಮು, ಆದಿಚುಂಚನಗಿರಿ ವಿವಿಯ ಕುಲಪತಿ ಡಾ.ಸಿ.ಕೆ.ಸುಬ್ಬರಾಯ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ದೇವ ರಾಜು, ಡಾ.ಸಾಗರ್, ಡಾ.ಅಜಯ್, ಡಾ.ಜ್ಯೋತಿ, ಡಾ.ಸುಶ್ಮಿತಾ, ಹಿರಿಯ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.