ಶ್ರೀರಂಗಪಟ್ಟಣ: ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ತಾಲ್ಲೂಕಿನ ಕೆಆರ್ಎಸ್ ಜಲಾಶಯದಿಂದ 1000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಬಿಡಲಾಗಿದೆ.
ಶನಿವಾರ ಸಂಜೆಯಿಂದ, ಜಲಾಶಯದ ಪ್ಲಸ್ 50 ಅಡಿ ಮಟ್ಟದ ಗೇಟ್ಗಳ ಮೂಲಕ ನೀರು ಬಿಡಲಾಗುತ್ತಿದೆ. ಕಬಿನಿ ಜಲಾಶಯದಿಂದ ನದಿಗೆ ಹರಿಯುತ್ತಿದ್ದ ನೀರಿನ ಪ್ರಮಾಣ ಕ್ಷೀಣಿಸಿರುವುದರಿಂದ ಕೆಆರ್ಎಸ್ ಜಲಾಶಯದಿಂದ ನೀರು ಹರಿಯಬಿಡಲಾಗಿದೆ. ಶಿವ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಮೈನಸ್ 16 ಅಡಿಗೆ ಕುಸಿದಿರುವುದರಿಂದ ಈ ಕ್ರಮ ವಹಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.
ಮೈಸೂರಿಗೆ 100 ಕ್ಯೂಸೆಕ್ ನೀರು ಸೇರಿ ಒಟ್ಟು 1100 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಭಾನುವಾರ ರಾತ್ರಿಯಿಂದ ಹೆಚ್ಚುವರಿಯಾಗಿ
ಇನ್ನೂ 500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತದೆ. ಇನ್ನೂ ಎರಡು ದಿನಗಳ ಕಾಲ ನೀರು ಹರಿಯಲಿದೆ. ಜಲಾಶಯದಲ್ಲಿ ಸದ್ಯ 78.20 ಅಡಿಗಳಷ್ಟು ನೀರಿನ ಸಂಗ್ರಹ ಇದೆ. ಜಲಾಶಯಕ್ಕೆ 139 ಕ್ಯೂಸೆಕ್ ನೀರು ಹರಿದುಬರುತ್ತಿದೆ ಎಂದು ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜೇಗೌಡ ‘ಪ್ರಜಾವಾಣಿ’ ತಿಳಿಸಿದ್ದಾರೆ.