ಮದ್ದೂರು: ಪಟ್ಟಣದ ಹೊಳೆ ಆಂಜನೇಯಸ್ವಾಮಿ ದೇಗುಲದ ಬಳಿ ಹಾಗೂ ಬೂದಗುಪ್ಪೆ ಬಳಿ ಶಿಂಷಾನದಿಯಿಂದ ಮರಳು ತೆಗೆಯಲು ಬಳಸುತ್ತಿದ್ದ 19 ಬೆಲ್ಲದ ಕೊಪ್ಪರಿಕೆ ಹಾಗೂ 24 ಬಿದಿರಿನ ತೆಪ್ಪಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಬುಧವಾರ ಪೊಲೀಸರ ನೆರವಿನೊಂದಿಗೆ ವಶಪಡಿಸಿಕೊಂಡರು.
ಶಿಂಷಾ ನದಿ ಪಾತ್ರದಲ್ಲಿ ಮರಳು ತೆಗೆಯುವುದು ಹಾಗೂ ಸಾಗಣೆ ಮಾಡುವುದನ್ನು ತಾಲ್ಲೂಕು ಆಡಳಿತ ನಿರ್ಬಂಧಿಸಿದೆ. ಈ ನಿರ್ಬಂಧದ ನಡುವೆಯು ಮರಳುಕೋರರು ಷಾ ಕದ್ದು ಮುಚ್ಚಿ ಮರಳು ಹೆಕ್ಕುವ ಹಾಗೂ ಸಾಗಣೆ ಮಾಡುತ್ತಿದ್ದ ಬಗೆಗೆ ಸಿಕ್ಕ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಲಾಯಿತು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನವೀನ್ `ಪ್ರಜಾವಾಣಿ~ಗೆ ತಿಳಿಸಿದರು.
ಕೊಪ್ಪರಿಕೆ ಹಾಗೂ ತೆಪ್ಪಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅಲ್ಲಿದ್ದ ಮರಳುಕೋರರು ಪರಾರಿಯಾಗಿದ್ದಾರೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಐ ಮಹೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗಳಾದ ಚಂದ್ರಶೇಖರ್, ಚಿಕ್ಕೇಗೌಡ ಇತರರು ಪಾಲ್ಗೊಂಡಿದ್ದರು.