ಪಾಂಡವಪುರ: ತಾಲ್ಲೂಕಿನ ಮೇಲುಕೋಟೆ ಸಮೀಪದ ಕದಲಗೆರೆ, ಕಾಡೇನಹಳ್ಳಿ, ನ್ಯಾಮನಹಳ್ಳಿಗಳಲ್ಲಿ ಶುಕ್ರವಾರ ಸಂಜೆ ಗ್ರಾಮ ದೇವತೆ ವರನಂದಮ್ಮ (ಹೊಗರಮ್ಮ) ಹಬ್ಬವು ಬಂಡಿ ಉತ್ಸವಗಳೊಂದಿಗೆ ಜರುಗಿತು.
ಕದಲಗೆರೆ ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನದ ಮುಂದೆ ಕಾಡೇನಹಳ್ಳಿ, ನ್ಯಾಮನಹಳ್ಳಿಯ ಜನರು ಜಮಾಯಿಸಿ ದೇವಿಗೆ ಪೂಜೆ ಸಲ್ಲಿಸಿದರು. ಸಿದ್ಧಗೊಂಡಿದ್ದ ಎತ್ತಿನ ಬಂಡಿಗಳು ಮತ್ತು ದೇವರಗುಡ್ಡರಿಗೆ ಭಕ್ತಿಭಾವದಿಂದ ನಮಸ್ಕರಿಸಿದರು.
ತಮಟೆ, ನಗಾರಿ ಜಾನಪದ ಕಲಾ ಮೇಳಗಳೊಂದಿಗೆ ಪ್ರಾರಂಭವಾದ ಮೆರವಣಿಗೆಯು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿರುವ ವರನಂದಮ್ಮ ಗುಡಿಯ ಕಡೆ ಸಾಗಿತು. ಬಿಳಿಬಣ್ಣದ ನಿಲುವಂಗಿ ಧರಿಸಿ ಗಂಧರ್ವಕನ್ಯೆಯರ ವೇಶದಲ್ಲಿದ್ದ ಕೆಲವರು ದೇವತೆಯನ್ನು ತಮ್ಮ ಮಡಿಲಲ್ಲಿಟ್ಟುಕೊಂಡು ಹೆಜ್ಜೆ ಹಾಕಿದರು. ಬಿಳಿಬಟ್ಟೆ, ಹೂಮಾಲೆ ಹಾಕಿಕೊಂಡು ದೇವರಗುಡ್ಡರು ಸಾಗುತ್ತಿದ್ದಾಗ ಭಕ್ತರು ದೂರದಿಂದಲೆ ಕೈಮುಗಿದು ಭಕ್ತಿಯನ್ನು ಪ್ರದರ್ಶಿಸಿದರು.
ಇದಕ್ಕೂ ಮುನ್ನ ಮೇಲುಕೋಟೆ ತಪ್ಪಲಿನಲ್ಲಿರುವ ಹೊಗರಮ್ಮನವರ ಗುಡಿಗೆ ವಿದ್ಯುತ್ ದೀಪ ಹಾಗೂ ಬಗೆಬಗೆಯ ಹೂಗಳಿಂದ ಶೃಂಗಾರ ಮಾಡಲಾಗಿತ್ತು. ಬಂಡಿ ಉತ್ಸವ ಗುಡಿಯ ಬಳಿ ಬಂದಾಗ ಗಂಧರ್ವಕನ್ಯೆಯರ ವೇಶದಲ್ಲಿ ದೇವತೆಯನ್ನು ಹೊತ್ತು ತಂದಿದ್ದವರು ಹೊಗರಮ್ಮನ ಗುಡಿಯಲ್ಲಿಟ್ಟರು. ದೇವರಗುಡ್ಡರು ಹೊಗರಮ್ಮ ದೇವತೆಗೆ ಪೂಜೆ ಸಲ್ಲಿಸಿದರು. ಗುಡಿಯ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.