ಮೈಸೂರು: ಈ ವಾರದಲ್ಲಿ ಬಹುತೇಕ ಎಲ್ಲ ಹೂವಿನ ದರಗಳು ಕುಸಿತ ಕಂಡಿವೆ. ಮಲ್ಲಿಗೆ, ಸೇವಂತಿಗೆ, ಕಾಕಡ ದರಗಳು ಚೇತರಿಕೆ ಕಂಡಿಲ್ಲ.
ಸೇವಂತಿಕೆ ಹೂ ಒಂದು ಮಾರಿಗೆ ₹ 10ಕ್ಕೆ ಇಳಿದಿರುವುದು ಬೆಳೆಗಾರರಿಗೆ ನಷ್ಟ ತರಿಸುತ್ತಿದೆ. ಒಳ್ಳೆಯ ಮಳೆ ಬಿದ್ದಿದ್ದರಿಂದ ಹೂವಿನ ಆವಕ ಹೆಚ್ಚಾಗಿದೆ. ಇದರಿಂದ ಹೂ ಬೆಳೆದವರು ಸಿಕ್ಕಿದ ದರಕ್ಕೆ ಮಾರಾಟ ಮಾಡುವಂತಹ ಸ್ಥಿತಿಗೆ ತಲುಪಿದ್ದಾರೆ.
ತರಕಾರಿಗಳಿಗೂ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿಗೆ ₹ 4ರಿಂದ 6ಕ್ಕೆ ಅಲ್ಪ ಏರಿಕೆ ಕಂಡಿದೆ. ₹ 26ರಲ್ಲಿದ್ದ ಬದನೆ ಬೆಲೆ ₹ 17ಕ್ಕೆ ಕಡಿಮೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬದನೆ ಮಾರುಕಟ್ಟೆಗೆ ಬರುತ್ತಿರುವುದರಿಂದ ದರ ಇನ್ನಷ್ಟು ಕುಸಿಯುವ ಭೀತಿ ಮೂಡಿದೆ.
ಕೆ.ಜಿಗೆ ಸಗಟು ಧಾರಣೆ ₹ 25ರಲ್ಲಿದ್ದ ಹಸಿಮೆಣಸಿನಕಾಯಿ ದರವು ಈ ವಾರ ₹ 18ಕ್ಕೆ ಕಡಿಮೆಯಾಗಿದೆ. ದಪ್ಪಮೆಣಸಿನಕಾಯಿ ದರ ₹ 25ಕ್ಕೆ ಕಡಿಮೆಯಾಗಿದೆ.
ಸೇಬಿನ ಆವಕವೂ ಈ ವಾರ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಇದರಿಂದ ದರ ಕಡಿಮೆಯಾಗಿದೆ. ಹಾಪ್ಕಾಮ್ಸ್ನಲ್ಲಿ ಇದರ ದರ ಕೆ.ಜಿಗೆ ₹ 100 ಇದೆ. ಆದರೆ, ನಗರದ ಅಲ್ಲಲ್ಲಿ ತಳ್ಳುವ ಗಾಡಿಗಳಲ್ಲಿ ಕೆ.ಜಿಗೆ ₹ 60ರಿಂದ ₹ 80ಕ್ಕೆ ಮಾರಾಟ ಮಾಡಲಾಗುತ್ತಿದೆ. ಕಳೆದೆರಡು ವಾರಗಳ ಹಿಂದೆ ಇದರ ದರ ಕೆ.ಜಿಗೆ ₹ 180 ಇತ್ತು.