ಮೈಸೂರು: ‘ನಟಿ ರಮ್ಯಾ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವಿಟ್ ಮಾಡಿರುವುದು ಅಶಿಸ್ತಿನ ವರ್ತನೆ ಮಾತ್ರವಲ್ಲ ಉದ್ದಟತನವೂ ಹೌದು. ಈ ಕುರಿತು ಅವರನ್ನು ಕರೆದು ವಿವರಣೆ ಕೇಳುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತಿಳಿಸಿದರು.
‘ರಮ್ಯಾ ಆಗಲಿ, ಮಹಮ್ಮದ್ ನಲಪಾಡ್ ಆಗಲಿ ಅಥವಾ ನಾನಾಗಲಿ ಯಾರೇ ಪಕ್ಷದ ವಿರುದ್ಧ ನಡೆದುಕೊಂಡರೆ ಅದು ಅಶಿಸ್ತು’ ಎಂದು ಇಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಪಕ್ಷದ ವರಿಷ್ಠರು, ರಾಜ್ಯದ ಉಸ್ತುವಾರಿಗಳ ಗಮನಕ್ಕೆ ತರಬಹುದಿತ್ತು. ಪಕ್ಷದ ಚೌಕಟ್ಟನ್ನು ಮೀರಬಾರದಿತ್ತು ಎಂದರು.
‘ಇದು ಪಕ್ಷದ ಆಂತರಿಕ ವಿಚಾರ ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳುತ್ತೇವೆ’ ಎಂದೂ ಹೇಳಿದರು.