ಮೈಸೂರು: ಎಚ್.ವಿ.ನಾಗರಾಜರಾವ್ ಅವರು ಪ್ರಶಸ್ತಿಗಳನ್ನು ಬಯಸಿದವರಲ್ಲ. ಆದರೂ, ಮೈಸೂರಿನ ಇತರ ವಿದ್ವಾಂಸರಿಗಿಂತ ಹೆಚ್ಚು ಪ್ರಶಸ್ತಿಗಳು ಸಂದಿವೆ ಎಂದು ವಿದ್ವಾನ್ ಬೆ.ನಾ.ವಿಜಯೀಂದ್ರಾಚಾರ್ಯ ತಿಳಿಸಿದರು.
ನಗರದ ಶ್ರೀಕೃಷ್ಣಧಾಮ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ‘ರಜತ ಮಹೋತ್ಸವ ಸಂಭ್ರಮ’ ಹಾಗೂ ಡಾ.ಎಚ್.ವಿ.ನಾಗರಾಜರಾವ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಲ್ಲಿಗೆ ಹೂವು ಒಂದೇ ಕಡೆ ಬೆಳೆದರೂ ಹೇಗೆ ತನ್ನ ಪರಿಮಳವನ್ನು ಎಲ್ಲೆಡೆ ಹೊರಸೂಸುತ್ತದೆಯೋ, ಹಾಗೇ ನಾಗರಾಜ್ ತಮ್ಮ ಜ್ಞಾನವನ್ನು ಪಸ ರಿಸಿದ್ದಾರೆ. ಅಲ್ಲದೇ, ಎಸ್.ಎಲ್.ಭೈರಪ್ಪ ಅವರ ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿ, ವಿದೇಶಗಳಿಗೂ ಸಂಸ್ಕೃತವನ್ನು ಪರಿಚಯಿಸಿದ್ದಾರೆ ಎಂದರು.
ಮನುಷ್ಯ ಎಷ್ಟೇ ಆಭರಣ ಹಾಕಿಕೊಂಡರೂ ಅವನ ಗುಣ ತಿಳಿಯುವುದು, ಅವನ ಮಾತಿನ ಶೈಲಿಯಿಂದ. ಹಾಗೆಯೇ, ನಾಗರಾಜರಾವ್ ಅವರಂತೆ ಸಜ್ಜನಿಕೆಯ ಗುಣಗಳನ್ನು ಬೆಳೆಸಿಕೊಂಡರೆ ಪ್ರಶಸ್ತಿಗಳು ತಾನಾಗಿಯೇ ಒಲಿದುಬರುತ್ತವೆ ಎಂದು ಹೇಳಿದರು.
ಪ್ರೊ.ಕೆ.ಎಸ್.ಸುಮನಾಚಾರ್ಯ ಅವರು ‘ಧರ್ಮ ಕರ್ಮಗಳ ಮರ್ಮ’ ಕುರಿತು ಹಾಗೂ ಪ್ರೊ.ಎಂ.ಆರ್.ಆನಂದತೀರ್ಥಾಚಾರ್ಯ ಮಾಳಗಿ ಅವರು ‘ಶ್ರೀಕೃಷ್ಣನ ನಿರ್ದೋಷಿತ್ವ’ ಕುರಿತು ಹಾಗೂ ಬೆ.ನಾ.ವಿಜಯೀಂದ್ರಾಚಾರ್ಯ ಅವರು ‘ಪುಣ್ಯಭೂಮಿ ಭಾರತ ನುಡಿನಾದ ನಾಟ್ಯಾಮೃತ’ ಕುರಿತು ಉಪನ್ಯಾಸ ನೀಡಿದರು.
ಕುಕ್ಕೆ ಸುಬ್ರಹ್ಮಣ್ಯದ ಸಂಪುಟನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರೊ.ಸಿ.ಎಚ್.ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಎಸ್.ಸುನೀಲಾಚಾರ್ಯ, ವಿದ್ವಾನ್ ಗುರು ಪಾವನಾಚಾರ್ಯ ಇದ್ದರು.