ಮೈಸೂರು: ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶುಲ್ಕ ಪಾವತಿಸುವಂತೆ ವಿದ್ಯಾರ್ಥಿಗಳ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಮೈಸೂರು ನಗರ ಕನ್ನಡಪರ ಸಂಘಟನೆಯ ನಾಗರಿಕ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇವರು ಇಲ್ಲಿನ ಮಹಾತ್ಮ ಗಾಂಧಿ ಚೌಕದಲ್ಲಿ ಬುಧವಾರ ಭಿತ್ತಿಪತ್ರ ಪ್ರದರ್ಶಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ನಿಂದ ಜನರು ಈಗಾಗಲೇ ಹಲವು ಬಗೆಯ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಕೆಲವು ಮಂದಿ ಕೆಲಸ ಇಲ್ಲದೇ ಪರಿತಪಿಸುತ್ತಿದ್ದಾರೆ. ಕಾರ್ಮಿಕರ ವೇತನಗಳು ಈಗಾಗಲೇ ಕಡಿತಗೊಂಡಿದೆ. ಹಲವರು ನಿರುದ್ಯೋಗಿಗಳಾಗಿ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶುಲ್ಕ ಪಾವತಿ ಮಾಡಬೇಕು ಎಂಬ ಒತ್ತಡ ಸರಿಯಲ್ಲ ಎಂದು ಕಾರ್ಯಕರ್ತರು ಖಂಡಿಸಿದರು.
ಕೋವಿಡ್ ಪೀಡಿತರಾದವರ ಕಷ್ಟ ಮತ್ತಷ್ಟು ದ್ವಿಗುಣಗೊಂಡಿದೆ. ಆಸ್ಪತ್ರೆಗಳೂ ಅವರಿಂದ ಹಣ ಕೀಳುತ್ತಿವೆ. ಇದರಿಂದ ಕೊರೊನಾ ಜಯಿಸಿ ಬಂದವರೂ ಆರ್ಥಿಕ ಕಷ್ಟಗಳಿಂದ ನರಳುತ್ತಿದ್ದಾರೆ. ಇವರಿಗೆಲ್ಲ ಸರ್ಕಾರ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣಗೌಡ, ರಾಮ್ಪ್ರಕಾಶ್, ಮುಖಂಡರಾದ ಸರ್ದಾರ್, ನಾಗರಾಜು, ಮುರುಗೇಶ್ ಇದ್ದರು.