ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಚಿತ್ರ ಲೋಕದ ಬೆರಗು ನೇತ್ರರಾಜು

ಹೃದಯವಂತರ ಭಾವಕೋಶ ತಟ್ಟಿದ ‘ಬದುಕಿನ’ ಚಿತ್ರಗಳ ಛಾಯಾಚಿತ್ರಕಾರ
Last Updated 22 ಮೇ 2021, 3:30 IST
ಅಕ್ಷರ ಗಾತ್ರ

ಮೈಸೂರು: ಒಂದೇ ಚಿತ್ರ; ಒಂದೇ ಸ್ಥಳ. ಆದರೆ ಆಯಾಮ ಮಾತ್ರ ಹಲವು. ವಿಭಿನ್ನ ದೃಷ್ಟಿಕೋನ... ನೋಡಿದವರ ಮನದಲ್ಲೂ ಮಿಡಿಯುವ ಅಂತಃಕರಣ...

ಇಂತಹ ಹಲವು ಛಾಯಾಚಿತ್ರ ಗಳಿಂದಲೇ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮನ್ನಣೆ ಪಡೆಯುವ ಜೊತೆಗೆ, ಅಸಂಖ್ಯಾತರ ಮನದಲ್ಲಿ ಸ್ಥಾನ ಪಡೆ ದವರು ಛಾಯಾಗ್ರಾಹಕ ನೇತ್ರರಾಜು.

ನೇತ್ರರಾಜು ಎಂದರೆ ಛಾಯಾಚಿತ್ರ ಲೋಕದ ಬೆರಗು. ಎಂದಿಗೂ ತಮ್ಮ ಕ್ಯಾಮೆರಾದಲ್ಲಿ ವೈಭವೀಕರಣ, ಸಿರಿ ವಂತಿಕೆಯನ್ನು ಸೆರೆ ಹಿಡಿದವರಲ್ಲ. ಬಡ ತಾಯಿಯೊಬ್ಬಳು ತನ್ನ ಮಗುವಿ ನೊಂದಿಗೆ, ಮೈಸೂರು ಅರಮನೆಯ ದೀಪಾಲಂಕಾರವನ್ನು ಬೆರಗಿನಿಂದ ನೋಡುತ್ತಿದ್ದ ಬಗೆಯನ್ನು ನೇತ್ರರಾಜು ಅವರ ಕ್ಯಾಮೆರಾ ಗ್ರಹಿಸಿದ್ದೇ ಬೇರೆ. ದಸರೆಯಲ್ಲಿ ಅರಮನೆಯ ಬೆಳಕಿನ ವೈಭವ ಮಂಕಾಗಿ, ತಾಯಿ–ಮಗಳಿಬ್ಬರೇ ಕಣ್ಮುಂದೆ ನಿಲ್ಲುವಂತೆ ಮಾಡಿದ್ದು, ‘ನೇತ್ರ’ ಅವರ ಕ್ಯಾಮೆರಾಗಷ್ಟೇ ಇರಬಹುದಾದ ವೈಶಿಷ್ಟ್ಯ.

ತಮ್ಮ ಛಾಯಾಚಿತ್ರಗಳಲ್ಲಿ ಬಡವರ ಬದುಕಿನ ಹಲವು ಆಯಾಮಗಳನ್ನು ಅವರು ಕಟ್ಟಿಕೊಡುತ್ತಿದ್ದರು. ಹೊಸದಾಗಿ ಡಾಂಬರು ಹಾಕಿದ್ದ ರಸ್ತೆಯಲ್ಲಿ ಹಳ್ಳಿಯ ಮಹಿಳೆಯರು ತಮ್ಮ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು ನಡೆದು ಹೋಗುವ ಛಾಯಾಚಿತ್ರವನ್ನು ಸೆರೆ ಹಿಡಿದು, ಆ ದೃಶ್ಯವು ಬಿಂಬಿಸಿದ ಭಾವ ಯಾವುದು ಎಂಬುದನ್ನು ಸದ್ದಿಲ್ಲದೇ ಎಲ್ಲರ ಭಾವಕೋಶಕ್ಕೆ ಮುಟ್ಟಿಸಿದವರು ನೇತ್ರಣ್ಣ.

ಹೊಸತನಕ್ಕೆ ತುಡಿತ: ‘ಆತನ ಬಗ್ಗೆ ಹೇಳಲು ಮಾತುಗಳೇ ಇಲ್ಲ. 7ನೇ ತರಗತಿಯ ತನಕವಷ್ಟೇ ಓದಿದ್ದರೂ, ಫೋಟೊಗ್ರಫಿ ಜಗತ್ತಿನಲ್ಲಿ ಬದಲಾಗುತ್ತಿದ್ದ ಎಲ್ಲ ತಾಂತ್ರಿಕತೆಯನ್ನು ಏಕಲವ್ಯನಂತೆ ಕಲಿತು ಅಳವಡಿಸಿಕೊಳ್ಳುತ್ತಿದ್ದ ಅಪರೂಪದ ವ್ಯಕ್ತಿ. ಸದಾ ಹೊಸತನಕ್ಕೆ ತುಡಿಯುತ್ತಿದ್ದ. ಗೊತ್ತಾಗದಿದ್ದನ್ನು ಕೇಳಿ ಕಲಿಯುತ್ತಿದ್ದ. ಆತನ ಶ್ರದ್ಧೆ ನಮ್ಮಲ್ಲಿ ಬೆರಗು ಮೂಡಿಸುತ್ತಿತ್ತು’ ಎನ್ನುತ್ತಾರೆ ಪರಿಸರ ತಜ್ಞರಾದ ಕೃಪಾಕರ–ಸೇನಾನಿ.

‘ಕ್ರಿಯಾಶೀಲ, ಎಲ್ಲರಿಗೂ ಪ್ರೀತಿಪಾತ್ರ ರಾಗಿದ್ದ ನೇತ್ರರಾಜು, ಮಾನವೀಯತೆಯ ಸಾಕಾರ ಮೂರ್ತಿಯಾಗಿದ್ದ. ಆತನ ಛಾಯಾಚಿತ್ರಗಳಲ್ಲೂ ಮಾನವೀಯ ತೆಯೇ ಕಾಣುತ್ತಿತ್ತು. ಇದರಿಂದ ಅವನು ಎಲ್ಲರಿಗೂ ಅತ್ಯಾಪ್ತನಾಗುತ್ತಿದ್ದ’ ಎನ್ನುತ್ತಾರೆ ಅವರು.

‘ಅವರ ಒಂದೊಂದು ಚಿತ್ರವೂ ಒಂದೊಂದು ಕಥೆ ಹೇಳುತ್ತಿತ್ತು. ಬಿಬಿಸಿಯ ಸಾಕ್ಷ್ಯಚಿತ್ರಕ್ಕೂ ಕೆಲಸ ಮಾಡಿದ್ದ ಹಿರಿಮೆ ಅವರದ್ದು. ಬಡತನದಲ್ಲೂ ಖುಷಿ, ಪ್ರೀತಿಯನ್ನು ಬಿಂಬಿಸುವುದು ಅವರಿಗೆ ಕರಗತ ವಾಗಿತ್ತು’ ಎಂದು ನೇತ್ರರಾಜು ಅವರ ಒಡನಾಡಿ ಕೊಪ್ಪಳದ ಮಹೇಶ್‌ ನೆನಪಿಸಿಕೊಂಡರು.

‘ಕಾಡುಗಳ್ಳ ವೀರಪ್ಪನ್‌ ಭೇಟಿಗೆ ಅವಕಾಶವೊಂದು ಬಂದಿತ್ತು. ಅನ್ಯ ಕಾರ್ಯನಿಮಿತ್ತ ಆಗ ಕಾಡಿಗೆ ಹೋಗ ಲಾಗಲಿಲ್ಲ. ಅಂದು ಹೋಗಿದ್ದರೆ ಅವನ ಮುಖವನ್ನು ಜಗತ್ತಿಗೆ ಅನಾವರಣಗೊಳಿಸಿದ ಮೊದಲಿಗ ನಾನಾಗುತ್ತಿದ್ದೆ. ಆ ಅವಕಾಶ ತಪ್ಪಿದ್ದಕ್ಕೆ ಬೇಸರವಿದೆ ಎಂದು ನೇತ್ರರಾಜು ಸರ್‌ ಆಗಾಗ್ಗೆ ನನ್ನೊಟ್ಟಿಗೆ ಹೇಳಿಕೊಂಡಿದ್ದರು’ ಎಂದು ಅವರು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT