ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಮೈಸೂರಿನಿಂದ ಇಬ್ಬರು ನವದೆಹಲಿಗೆ

Last Updated 21 ಜನವರಿ 2020, 13:51 IST
ಅಕ್ಷರ ಗಾತ್ರ

ಮೈಸೂರು: ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ‌ಭಾಗವಹಿಸಲು ಬುಡಕಟ್ಟು ಸಮುದಾಯಕ್ಕೆ ಸೇರಿದ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅಂಗಡಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಹೂರಾಜು ಮತ್ತು ಅವರ ಪತ್ನಿ ಚಂದೋಶಿ ಅವರನ್ನು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಆಯ್ಕೆ ಮಾಡಿದೆ.

‘ಇವರು ಅಲ್ಲಿ ಕೇವಲ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವುದು ಮಾತ್ರವಲ್ಲ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಅವರೊಂದಿಗೆ ಚಹಾಕೂಟದಲ್ಲೂ ಭಾಗವಹಿಸುವರು. ಅಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ಇದೆ’ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತದಿಂದ ಪರಿಶಿಷ್ಟ ಪಂಗಡದ ತಲಾ ಇಬ್ಬರನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ವಿವಿಧ ಬಗೆಯ ಸಂಸ್ಕೃತಿಗಳ ಪರಿಚಯ ಆಗುವುದಷ್ಟೇ ಅಲ್ಲ ಅವರ ಸಮಸ್ಯೆಗಳ ಅನಾವರಣವೂ ಆಗಲಿದೆ. ಇದೊಂದು ಅಪರೂಪದ ಅವಕಾಶ ಎಂದು ಅವರು ಹೇಳಿದರು.

ಈ ವೇಳೆ ಮಾತನಾಡಿದ ಹೂರಾಜು, ‘ನಮ್ಮ ಹಕ್ಕಿಪಿಕ್ಕಿ ಸಮುದಾಯವು ಅಸ್ಮಿತೆಯ ಹುಡುಕಾಟದಲ್ಲಿದೆ. ನಾವೂ ಇದ್ದೀವಿ ಎಂದು ನಾವೇ ಕೂಗಿ ಹೇಳುವಂತಹ ಸ್ಥಿತಿ ಇನ್ನೂ ಇದೆ. ನಮ್ಮ ಮೂಲಕಸುಬುಗಳು ನಾಶವಾಗಿ, ಅತಂತ್ರವಾಗಿದ್ದೇವೆ’ ಎಂದು ಅಳಲು ತೋಡಿಕೊಂಡರು.

ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುವುದೇ ಕೆಲಸ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಸರ್ಕಾರವೇನೋ ಬುಡಕಟ್ಟು ಸಮುದಾಯವರಿಗೆ ಹಿತವಾಗಲಿ ಎಂದು ಕಾಯ್ದೆ ರೂಪಿಸುತ್ತದೆ. ಆದರೆ, ಅದರ ಅನುಷ್ಠಾನ ಮಾತ್ರ ಸರಿಯಾಗಿ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ಪೂರ್ವಿಕರನ್ನು ನಾವು ಕಾಡಿನಲ್ಲೇ ಮಣ್ಣು ಮಾಡಿದ್ದೇವೆ. ಅವರ ಸಮಾಧಿ ನೋಡಲೂ ಇಂದು ಆಗುವುದಿಲ್ಲ. ನಮ್ಮನ್ನು ಮಣ್ಣು ಮಾಡಲು ಸ್ಮಶಾನವೂ ಇಲ್ಲ. ರಸ್ತೆ ಬದಿಯಲ್ಲಿ ಹೂಳಬೇಕಾದ ಸ್ಥಿತಿ ಇದೆ ಎಂದು ಕಿಡಿಕಾರಿದರು.

ಈ ವೇಳೆ ಅವರು ತಮ್ಮನ್ನು ಆಯ್ಕೆ ಮಾಡಿದ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT