ಮೈಸೂರು: ಇಲ್ಲಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗ ಭಾನುವಾರ ಯೋಗ ಪ್ರದರ್ಶನದ ಮೂಲಕ ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಒಡನಾಡಿ ಸೇವಾ ಸಂಸ್ಥೆಯು ‘ಯೋಗ ಸ್ಟಾಪ್ಸ್ ಟ್ರಾಫಿಕಿಂಗ್’ ಘೋಷಣೆಯಡಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡಿದರು.
‘ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ. ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಅವುಗಳ ರಕ್ಷಣೆಗೆ ಕೈ ಜೋಡಿಸಬೇಕು’ ಎಂದು ಕೋರಿದರು. ಒಡನಾಡಿ ಸಂಸ್ಥೆಯಂತಹ ಜನಪರ ಹೋರಾಟಗಳಿಗೆ ಬೆಂಬಲ ನೀಡಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ, ‘16ನೇ ವರ್ಷದ ಈ ಕಾರ್ಯಕ್ರಮವನ್ನು ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಸೌಜನ್ಯಳಿಗೆ ಅರ್ಪಿಸುತ್ತಿದ್ದೇವೆ. ಆಕೆಯ ಸಾವಿನ ನ್ಯಾಯಸಮ್ಮತ ತನಿಖೆ ನಡೆದು ಆರೋಪಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.
ನೂರಾರು ಮಂದಿ ಆಸಕ್ತರು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ನ್ಯಾಯಾಧೀಶೆ ಡಿ.ಮಂಜುಳಾ, ಹೋರಾಟಗಾರ್ತಿ ಡಾ.ರತಿ ರಾವ್, ಯೋಗಾಚಾರ್ಯ ಬಿ.ಶಾಂತಾರಾಮ್, ಒಡನಾಡಿ ಸೇವಾಸಂಸ್ಥೆಯ ನಿರ್ದೇಶಕ ಪರಶು, ಪ್ರದೀಪ್ ಪಾಲ್ಗೊಂಡರು.