ಮೈಸೂರು: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು–ಕೊಡಗು ಕ್ಷೇತ್ರ ಸೇರಿದಂತೆ ದೇಶದಾದ್ಯಂತ ಪಕ್ಷಕ್ಕಾಗಿ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದವರಿಗೆ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಅದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್ ಹೇಳಿದರು.
ಇಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಮೈಸೂರು–ಕೊಡಗು ಕ್ಷೇತ್ರದ ಟಿಕೆಟ್ಗೆ ನಾನೂ ಆಕಾಂಕ್ಷಿಯಾಗಿದ್ದೇನೆ. ಪಕ್ಷಕ್ಕಾಗಿ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮಂಥವರಿಗೆ ಮಹತ್ವ ಕೊಡಲಿಲ್ಲವಾದರೆ ತಪ್ಪು ಸಂದೇಶ ಹೋಗುತ್ತದೆ’ ಎಂದರು.
‘ಪಕ್ಷವು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವ ಕೆಲಸ ಮಾಡುವುದಿಲ್ಲ ಎಂಬ ವಿಶ್ವಾಸವಿದೆ’ ಎಂದೂ ಹೇಳಿದರು.
‘ಕೆಲಸ ಮಾಡುವವರು ಪಕ್ಷದ ನಿಜವಾದ ಬೇರುಗಳು. ಪಕ್ಷ ನ್ಯಾಯಾಲಯವಿದ್ದಂತೆ, ಹೈಕಮಾಂಡ್ ನ್ಯಾಯಾಧೀಶರಿದ್ದಂತೆ. ವರಿಷ್ಠರು, ನ್ಯಾಯಸಮ್ಮತ ತೀರ್ಮಾನವನ್ನು ತೆಗೆದುಕೊಳ್ಳಬೇಕು. ಮಂಕುಬೂದಿ ಎರಚಿ ಲಾಬಿ ಮಾಡುವ ರಾಜಕಾರಣದಲ್ಲಿ ಕೆಲವರು ತೊಡಗಿದ್ದಾರೆ. ಅದು ಪಕ್ಷದಲ್ಲಿ ನಡೆಯುವುದಿಲ್ಲ’ ಎಂದರು.
‘ಈ ಕ್ಷೇತ್ರದಿಂದ ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ದೊರೆಯುತ್ತದೆ ಎಂಬ ವಿಶ್ವಾಸ ನಮಗಿದೆ. ನನಗೆ ಅಥವಾ ವಿಜಯ್ಕುಮಾರ್ಗೆ ಟಿಕೆಟ್ ಸಿಗುವ ಭರವಸೆ ಇದೆ. ನೆನ್ನೆ–ಮೊನ್ನೆ ಹುಟ್ಟಿಕೊಂಡಿರುವ ಕೆಲವರು, ಫ್ಲೆಕ್ಸ್ ಹಾಕಿಕೊಂಡು ಓಡಾಡುತ್ತಿದ್ದಾರೆ. ನಾಯಕರ ಮನೆ ಬಾಗಿಲಲ್ಲಿ ನಿಂತು ಕೈಮುಗಿಯುತ್ತಿದ್ದಾರೆ. ಅಂಥವರಿಗೆ ಅವಕಾಶ ಸಿಗುವುದಿಲ್ಲ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಪ್ರತಿಕ್ರಿಯಿಸಿದರು.