ಮೈಸೂರು: ವೇಶ್ಯಾವಾಟಿಕೆ ನಡೆಯುತ್ತಿದ್ದ ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮಹಿಳೆ ಸೇರಿದಂತೆ ಐವರನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎಡತಾಳು ನಿವಾಸಿ ರಘುನಂದನ್(35), ಚನ್ನರಾಯಪಟ್ಟಣ ತಾಲ್ಲೂಕಿನ ಪ್ರದೀಪ್ (29), ಮೋಹನ್ಕುಮಾರ್ (26), ಕಾರವಾರ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಳ್ಳಟ್ಟಿ ಗ್ರಾಮದ ಸತೀಶ್(26), 30 ವರ್ಷದ ಮಹಿಳೆ ಬಂಧಿತರು.
ಗೋಕುಲಂನ ‘ದಿ ಆಲೀವ್ ಶೈನ್’ ಹೋಟೆಲ್ನಲ್ಲಿ ಸ್ಪಾ ನೆಪದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದರು. ಈ ವೇಳೆ ₹ 11,720 ನಗದು, 6 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ರಘುನಂಧನ್ ಹಾಗೂ ಮಹಿಳೆ ಈ ಹಿಂದೆ ಲಷ್ಕರ್ ಮತ್ತು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಆರೋಪವಿದೆ.
ಸಿಸಿಬಿ ಇನ್ಸ್ಪೆಕ್ಟರ್ ಸಿ.ಕಿರಣ್ಕುಮಾರ್, ವಿ.ವಿ.ಪುರಂ ಠಾಣೆಯ ಇನ್ಸ್ಪೆಕ್ಟರ್ ವಿನಯ್, ಸಿಬ್ಬಂದಿಗಳಾದ ಶಿವರಾಜು, ಎಂ.ಆರ್.ಗಣೇಶ್, ನಿರಂಜನ್, ಚಂದ್ರಶೇಖರ್, ಗೌತಮ್, ವಿಶ್ವ, ಮಧುಕುಮಾರ್, ಹೇಮಾವತಿ, ಅಂಬಿಕಾ, ಶಿಲ್ಪಶ್ರೀ, ಸುಜಾತಾ, ಹನುಮಕ್ಕ ಕಾರ್ಯಾಚರಣೆ ತಂಡದಲ್ಲಿದ್ದರು.
ಆಟೊ ಕಳ್ಳನ ಬಂಧನ
ವಿವಿಧೆಡೆ ಆಟೊರಿಕ್ಷಾ ಕಳವು ಮಾಡಿದ್ದ ಕಳ್ಳನನ್ನು ಮಂಡಿ ಪೋಲಿಸರು ಬಂಧಿಸಿ, 2 ಆಟೊ ವಶಪಡಿಸಿಕೊಂಡಿದ್ದಾರೆ.
ಕೆಸರೆಯ ಕುರಿಮಂಡಿ ನಿವಾಸಿ ಮಹಮ್ಮದ್ ಹನೀಫ್(19) ಬಂಧಿತ ಆರೋಪಿ.
ಮಂಡಿ ಠಾಣೆ ವ್ಯಾಪ್ತಿಯ ಖಬರ್ಸ್ತಾನ್ ರಸ್ತೆಯಲ್ಲಿ ಆಟೊ ತಳ್ಳಿಕೊಂಡು ಹೋಗುತ್ತಿದ್ದ ಹನೀಫ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಂಡಿ ಮೊಹಲ್ಲಾ ಹಾಗೂ ಶ್ರೀರಂಗಪಟ್ಟಣದಲ್ಲಿ ಎರಡು ಆಟೊ ಕಳವು ಮಾಡಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಹನೀಫ್ನಿಂದ ಆಟೊ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಲ್.ಅರುಣ್, ಎಎಸ್ಐ ಕೆ.ಎಸ್.ಗುರುಸ್ವಾಮಿ, ಸಿಬ್ಬಂದಿಗಳಾದ ಜಯಪಾಲ, ಎಸ್.ಜಯಕುಮಾರ್, ಚಂದ್ರಶೇಖರ್, ಎಂ.ಎಲಿಯಾಸ್, ರವಿಗೌಡ, ಶಂಕರ್ ಟಿ.ಬಂಡಿವಡ್ಡರ, ಹನುಮಂತ ಕಲೈದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಗಾಂಜಾ ಮಾರಾಟ: ಮಹಿಳೆ ಬಂಧನ
ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಮಂಡಿ ಪೋಲಿಸರು ಬಂಧಿಸಿ, 270 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಸುಲ್ತಾನ್ ಪಾರ್ಕ್ ರಸ್ತೆ ನಿವಾಸಿ ಫಾತಿಮ್ ಖಾನಂ(38) ಬಂಧಿತೆ.
ಈಕೆ ಮಂಡಿ ಮೊಹಲ್ಲಾದ ಕೆ.ಟಿ.ರಸ್ತೆಯಲ್ಲಿ ಕ್ಯಾರಿ ಬ್ಯಾಗ್ ಹಿಡಿದು, ಪೇಪರ್ನಲ್ಲಿ ಸುತ್ತಿದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.