ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೆ ಬೆಳ್ಳಗಿದೆ ಎಂದು ಮೋದಿ ಹೇಳಿದ್ರೆ ಇವರೂ ಹಾಗೇ ಹೇಳ್ತಾರೆ.. ಸಿದ್ದರಾಮಯ್ಯ

ಬಿಜೆಪಿಯವರು ಬಗ್ಗೆ ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ವ್ಯಂಗ್ಯ
Published 27 ಮಾರ್ಚ್ 2024, 10:54 IST
Last Updated 27 ಮಾರ್ಚ್ 2024, 10:54 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ನೀಡಬೇಕಿರುವ ತೆರಿಗೆ ಬಾಕಿ, ಅನುದಾನ ಮತ್ತು ಬರ ಪರಿಹಾರದ ವಿಷಯದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಹಿರಂಗ ಚರ್ಚೆಗೆ ಬರಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಭಾನುವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆಯವರೆಗೆ ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನ ಖಾಸಗಿ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆದು ಮರಳಿದ ಅವರು, ವಿದ್ಯಾರಣ್ಯ‍ಪುರಂನ ಭೂತಾಳೆ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ವಿವಿಧ ಪಕ್ಷದ ಮುಖಂಡರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಭಾಷಣ ಮಾಡಿದರು.

‘ಈಚೆಗೆ ಮೈಸೂರಿಗೆ ಬಂದಿದ್ದ ನಿರ್ಮಲಾ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ. ಅವರು ಒಂದೇ ವೇದಿಕೆಗೆ ಬರಲಿ. ನಿಜವೇನು, ಸುಳ್ಳೆನು ಎನ್ನುವುದು ಜನರಿಗೆ ಗೊತ್ತಾಗಲಿ. ಗ್ಯಾರಂಟಿ ಕಾರ್ಯಕ್ರಮಗಳಿಗೆ ಈ ವರ್ಷದಲ್ಲಿ ₹ 34ಸಾವಿರ ಕೋಟಿ ಖರ್ಚಾಗಿದೆ. ಮುಂದಿನ ಸಾಲಿಗೆ ₹57ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ ಇಟ್ಟಿದ್ದೇವೆ. ನಮ್ಮ ಕಾರ್ಯಕ್ರಮಗಳಿಗೆ ಒಂದು ಪೈಸೆಯನ್ನೂ ಕೊಡಬೇಡಮ್ಮ‌. ಕೇಂದ್ರದಿಂದ ನಾವು ಕೇಳಿಯೂ ಇಲ್ಲ’ ಎಂದು ತಿರುಗೇಟು ನೀಡಿದರು.

‘ಕಾಗೆ ಬೆಳ್ಳಗಿದೆ ಎಂದು ನರೇಂದ್ರ ಮೋದಿ ಹೇಳಿದರೆ ಇವರೂ ಬೆಳ್ಳಗಿದೆ ಎನ್ನುತ್ತಾರೆ’ ಎಂದು ಟೀಕಿಸಿದರು.

‘ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಕೊಡುತ್ತೇವೆ ಎಂದು ಕೇಂದ್ರದ ಬಜೆಟ್‌ನಲ್ಲಿ ಘೋಷಿಸಿದ್ದರು. ಅದಕ್ಕೆ ಈ ವರ್ಷ ಒಂದು ಪೈಸೆಯೂ ಬಂದಿಲ್ಲ.‌ ಇದು ನಿಜವೋ, ಸುಳ್ಳೋ? ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ. ₹ 18,171 ಕೋಟಿ ಬರಗಾಲ ಪರಿಹಾರ ಕೇಳಿ ಐದು ತಿಂಗಳಾದರೂ, ಮೂರು ಬಾರಿ ಮನವಿ ಸಲ್ಲಿಸಿದರೂ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಬಿಡುಗಡೆ ಮಾಡಿಸಿದ್ದೀಯಾ ತಾಯಿ?’ ಎಂದು ಕೇಳಿದರು.

‘15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ₹5,495 ಕೋಟಿ ಕೊಡಬೇಕಾಗುತ್ತದೆ ಎಂದು ಆಯೋಗದ ಅಧ್ಯಕ್ಷರು ಶಿಫಾರಸು ಮಾಡಿದ್ದಾರೆ. ಅದನ್ನೂ ಕೊಡಲಿಲ್ಲ. ಕನ್ನಡಿಗರಿಗೆ ಬಿಜೆಪಿಯವರು ಮಾಡಿರುವ ದ್ರೋಹವಿದು’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT