ಮೈಸೂರು: ‘ದೇಶದಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದಿರುವ ಒಕ್ಕೂಟ ಸರ್ಕಾರವು ನಿಜವಾದ ಅರ್ಥದಲ್ಲಿ ಹಲವು ಪಕ್ಷಗಳ ಒಕ್ಕೂಟವಾಗಿ ಕಾರ್ಯ ನಿರ್ವಹಿಸಬೇಕು. ಸಂವಿಧಾನದ ಸಾರ್ವಭೌಮತೆಯನ್ನು ಒಪ್ಪಿ, ಪ್ರಜಾಪ್ರಭುತ್ವ ಹಕ್ಕುಗಳ ಮರು ಸ್ಥಾಪನೆ ಮಾಡಬೇಕು’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಆಗ್ರಹಿಸಿದರು.
ನಗರದ ಗಾಂಧಿ ಚೌಕದಲ್ಲಿ ಭಾನುವಾರ ‘ಸಂವಿಧಾನ ಪ್ರಸ್ತಾವನೆ ಓದು’ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ‘ಸಂವಿಧಾನ ರಕ್ಷಿಸಿ’ ಎಂಬ ಹಕ್ಕೊತ್ತಾಯ ಮಾಡಿದ ಪ್ರಗತಿಪರರು, ಜನ ಕೇಂದ್ರಿತ ಅಭಿವೃದ್ಧಿ ಈ ಸರ್ಕಾರದ ನಡೆಯಾಗಬೇಕು ಎಂದು ಒತ್ತಾಯಿಸಿದರು.
‘ಈ ಹಿಂದಿನ 10 ವರ್ಷಗಳಲ್ಲಿ ದೇಶದಲ್ಲಿ ಅಧಿಕಾರದಲ್ಲಿದ್ದ ಏಕ ಪಕ್ಷದ ಕೇಂದ್ರ ಸರ್ಕಾರವು ಅನೇಕ ಅಸಂವಿಧಾನಾತ್ಮಕ ಕ್ರಮಗಳನ್ನು ಕೈಗೊಂಡು ಸುಪ್ರೀಂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದೆ. ದೇಶದ ಮತದಾರರು ಈಗಷ್ಟೇ ಮುಗಿದ ಚುನಾವಣೆಯಲ್ಲಿ ಈ ದೇಶವು ಸಾಂವಿಧಾನಿಕ ನಡೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನಾದರೂ ಒಕ್ಕೂಟದ ಆಶಯದೊಂದಿಗೆ ಕಾರ್ಯ ನಿರ್ವಹಿಸಬೇಕು’ ಎಂದು ಆಗ್ರಹಿಸಿದರು.
ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ, ಪತ್ರಕರ್ತ ಕೃಷ್ಣಪ್ರಸಾದ್, ಲ. ಜಗನ್ನಾಥ, ಜಗದೀಶ ಸೂರ್ಯ, ಆರ್.ಜಿ. ಭಂಡಾರಿ, ಬಿ.ಎಂ.ಪ್ರವೀಣ, ಈ. ರತಿರಾವ್, ಸ್ವರ್ಣಮಾಲಾ ಶಿರಸಿ, ಪಿ.ಎಸ್. ಶ್ರೀದೇವಿ, ರೂಪಾ, ಪಂಡಿತಾರಾಧ್ಯ, ಎಸ್. ಸಿದ್ದಪ್ಪ ಪಾಲ್ಗೊಂಡರು.