ವಾಸು ನಿಧನಕ್ಕೆ ಕೆಯುಡಬ್ಲ್ಯುಜೆ ಸಂತಾಪ
ಮಾಜಿ ಶಾಸಕರು ಹಾಗೂ ‘ಪ್ರಜಾನುಡಿ’ ಪತ್ರಿಕೆಯ ಮಾಲೀಕ ವಾಸು ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ)ಸಂತಾಪ ವ್ಯಕ್ತಪಡಿಸಿದೆ.
‘ಚಾಮರಾಜ ಕ್ಷೇತ್ರದ ಶಾಸಕರಾಗಿ, ಮೈಸೂರಿನಲ್ಲಿ ನೂತನ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆ.ಆರ್.ಎಸ್. ರಸ್ತೆಯಲ್ಲಿ ಹೊಸದಾಗಿ ಜಿಲ್ಲಾಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ಮಹಾರಾಣಿ ವಾಣಿಜ್ಯ ಕಾಲೇಜಿಗೆ ನೂತನ ಕಟ್ಟಡ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳಲು ಅಪಾರವಾಗಿ ಶ್ರಮಿಸಿದ್ದರು’ ಎಂದು ಅಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದ್ದಾರೆ.
‘ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಮೈಸೂರಿನ ಮೇಯರ್ ಆಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದರು. ಸಹಕಾರ ಕ್ಷೇತ್ರದಲ್ಲೂ ತೊಡಗಿಸಿಕೊಂಡು ತಮ್ಮದೇ ಆದ ಛಾಪು ಮೂಡಿಸಿದ್ದರು. 2002ರಿಂದ ‘ಪ್ರಜಾನುಡಿ’ ಪತ್ರಿಕೆಯನ್ನು ಮುನ್ನಡೆಸಿ ಅನೇಕ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುತ್ತಾ ಪತ್ರಿಕೋದ್ಯಮದಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿರುವುದನ್ನು ಮರೆಯುವಂತಿಲ್ಲ’ ಎಂದು ಹೇಳಿದ್ದಾರೆ.