ಮೈಸೂರು: ಇಲ್ಲಿನ ಜನತಾನಗರದ ನಿವಾಸಿ ರಮೇಶ್ ಎಂಬುವವರ ಪುತ್ರ ಆಕಾಶ್ (16) ಗುರುವಾರ ಮಧ್ಯಾಹ್ನ ಕಬಡ್ಡಿ ಆಡುವ ಮೇಲೆ ಬಿದ್ದು ಮೃತಪಟ್ಟಿದ್ದಾನೆ.
ಈತ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದು, ಮಧ್ಯಾಹ್ನ ಆಟ ಆಡುವ ವೇಳೆ ಎದುರಾಳಿ ತಂಡದ ಆಟಗಾರರನ್ನು ಔಟ್ ಮಾಡಲು ಹೋದಾಗ ಬಿದ್ದು ತಲೆಗೆ ಪೆಟ್ಟಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಗ್ಯಾಸ್ ರೀಫಿಲ್ಲಿಂಗ್; ವ್ಯಕ್ತಿ ಬಂಧನ
ಮೈಸೂರು: ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಲಷ್ಕರ್ ಮೊಹಲ್ಲಾದ ಮುಹೀಬ್ ವುರ್ ರೆಹಮಾನ್ ಎಂಬಾತನನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು ಸಿಲಿಂಡರ್ಗಳು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಮನೆಯ ರೂಮಿನೊಳಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವುದು ತಪಾಸಣೆ ವೇಳೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿ ಶವ ಪತ್ತೆ ಮೈಸೂರು: ಕಳಸ್ತವಾಡಿಯ ಗ್ರಾಮದ ದೊಡ್ಡ ಕಾಲುವೆ ಬಳಿ ಸುಮಾರು 65 ರಿಂದ 70 ವರ್ಷದ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ಪತ್ತೆಯಾಗಿದೆ. ಮೃತರ ಹೆಸರು ಮತ್ತು ವಿಳಾಸ ಗೊತ್ತಾಗಿಲ್ಲ.
5.3 ಅಡಿ ಎತ್ತರವಿದ್ದು, ಕೋಲು ಮುಖ, ತೆಳ್ಳನೆ ಶರೀರ, ಕಪ್ಪು ಮೈ ಬಣ್ಣ ಹೊಂದಿದ್ದು, ಬಲ ಎದೆಭಾಗದ ಮೇಲೆ ಚಿಕ್ಕ ಕಪ್ಪು ಕಾರಳ್ಳು ಇದೆ. ಮೃತದೇಹವನ್ನು ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಶವಾಗಾರದ ಶೈತ್ಯಾಗಾರದಲ್ಲಿ ಇರಿಸಲಾಗಿದೆ.
ಸಂಬಂಧಿಕರು ಇದ್ದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆ ದೂ.ಸಂಖ್ಯೆ 0821-2418339,21488315, 2148115 ಸಂಪರ್ಕಿಸಲು ಪ್ರಕಟಣೆ ಕೋರಿದೆ.