ಮೈಸೂರು: ಮೈಸೂರು ಲಿಟರರಿ ಅಸೋಸಿಯೇಷನ್ ವತಿಯಿಂದ ಅ. 19ರಂದು ಬೆಳಿಗ್ಗೆ 10ಕ್ಕೆ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ‘ಮೈಸೂರು ಲಿಟರರಿ ಫೆಸ್ಟ್ - 2019’ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಕೆ.ಸಿ.ಬೆಳ್ಳಿಯಪ್ಪ ತಿಳಿಸಿದರು.
ಕವಿ ಕೇಕಿ ಎನ್.ದಾರೂವಾಲಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಾಹಿತಿ ಅನಿತಾ ನಾಯರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪತ್ರಕರ್ತ ಸಚ್ಚಿದಾನಂದ ಮೂರ್ತಿ ಅವರು ‘ಸಾಹಿತ್ಯ ಹಾಗೂ ಸಾಮಾಜಿಕ ಜಾಲತಾಣ’ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಪತ್ರಕರ್ತ ಸುರೇಶ್ ಮೆನನ್ ಅವರು ‘ಸಾಹಿತ್ಯ ಮತ್ತು ಕ್ರೀಡೆ’ ಕುರಿತು, ಅನುವಾದಕಿ ಪ್ರೊ.ವನಮಾಲಾ ವಿಶ್ವನಾಥ್ ಅವರು ‘ಹರಿಶ್ಚಂದ್ರ ಕಾವ್ಯ’ ಕುರಿತು ಉಪನ್ಯಾಸ ನೀಡುವರು. ಸಂಘದ ಉಪಾಧ್ಯಕ್ಷ ಡಾ.ಎಚ್.ಎಸ್.ಶಿವಣ್ಣ ಅವರು ಅಧ್ಯಕ್ಷತೆವಹಿಸುವರು ಎಂದರು.
ನೋಂದಣಿ ಮಾಡಿದ ಸಭಿಕರಿಗೆ ಪ್ರಮಾಣಪತ್ರ ನೀಡಲಾಗುವುದು. ನೋಂದಣಿ ಶುಲ್ಕ ಇರುವುದಿಲ್ಲ ಎಂದು ಹೇಳಿದರು.
ಸಂಘದ ಖಜಾಂಚಿ ಗೀತಾ ಗಂಗಾಧರನ್, ಪ್ರೊ.ಬಿ.ಎನ್.ಬಾಲಾಜಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.