ಹನೂರು: ಪಟ್ಟಣದಲ್ಲಿ ಮಂಗಳವಾರ ಹಾಗೂ ಬುಧವಾರ ಮಹಿಷಾಸುರ ಮರ್ಧಿನಿ ಜಾತ್ರಾ ಮಹೋತ್ಸವ ಅಂಗವಾಗಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದಿಂದ ಜರುಗಿದವು.
ಮಂಗಳವಾರ ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಣ್ಣು ಮಕ್ಕಳು ತಂಪು ಜ್ಯೋತಿ (ತಂಬಿಟ್ಟು) ತಯಾರಿಸಿ, ಅವನ್ನು ಹೂಗಳಿಂದ ಸಿಂಗರಿಸಿ ದೇವಾಲಯಕ್ಕೆ ತಂದು ಸಮರ್ಪಿಸಿದರು. ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ನಿವೇದನೆ ಮಾಡಿಕೊಂಡರು. ಬುಧವಾರ ಹರಕೆ ಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆ ಮಾಡುವ ಮೂಲಕ ತಮ್ಮ ಕಾಣಿಕೆ ಸಲ್ಲಿಸಿದರು. ರಾಜ್ಯದ ನಾನಾ ಭಾಗಗಳಿಂದ ಬಾಯಿ ಬೀಗ ಕಾರ್ಯಕ್ರಮವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಬರ ಬಿಸಿಲಿನಲ್ಲಿ ದಣಿದು ಬರುವ ಭಕ್ತಾದಿಗಳಿಗೆ ದೇವಾಲಯದ ಮುಂಭಾಗ ಮಜ್ಜಿಗೆ, ಪಾನಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಗುರುವಾರ ಮುಂಜಾನೆ ಹಗಲಗುಣಿ ಪೂಜೆ ಕಾರ್ಯಕ್ರಮವು ದೇವಾಲಯದಲ್ಲಿ ನಡೆಯಲಿದೆ. ಅರ್ಚಕ ಗೋಪಾಲ್ ರಾವ್, ಅರುಣ್ ರಾವ್ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ವಿದ್ಯುತ್ ದೀಪ ಅಲಂಕಾರ: ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶ ಬಸ್ ನಿಲ್ದಾಣದಲ್ಲಿ ಸುಮಾರು 30 ಅಡಿ ಎತ್ತರದ ವಿದ್ಯುತ್ ದೀಪ ಅಲಂಕಾರದ ಕಟೌಟ್ ನಿರ್ಮಾಣ ಮಾಡಿ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ದೀಪ ಅಲಂಕಾರವನ್ನು ಮಾಡಲಾಗಿತ್ತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಹರಕೆ ಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಳ್ಳುವ ಮೂಲಕ ತಮ್ಮ ಹರಕೆ ಸಲ್ಲಿಸಿದರು