ಮೈಸೂರು: ‘ಮಕ್ಕಳು ಏಸುಕ್ರಿಸ್ತರ ಜೀವನ ಅರಿತು ಆಧ್ಯಾತ್ಮಿಕ ಜೀವನದತ್ತ ಒಲವು ಮೂಡಿಸಲು ಪರಮ ಪ್ರಸಾದ ಸಂಸ್ಕಾರ ಉತ್ತಮ ವೇದಿಕೆಯಾಗಿದೆ’ ಎಂದು ಕ್ಯಾಥೋಲಿಕ್ ಕೇಂದ್ರದ ನಿರ್ದೇಶಕ ಫಾ. ಜೋಸೆಫ್ ಮರಿ ಹೇಳಿದರು.
ಇಲ್ಲಿನ ಗಾಯತ್ರಿಪುರಂ ಸೇಂಟ್ ಆ್ಯಂಟನಿ ಚರ್ಚ್ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 30 ಮಕ್ಕಳಿಗೆ ‘ಪರಮಪ್ರಸಾದ ಸಂಸ್ಕಾರ’ ನೀಡಿ ಅವರು ಮಾತನಾಡಿದರು.
‘ಪೋಷಕರು ಮಕ್ಕಳಿಗೆ ಆಧ್ಯಾತ್ಮಿಕ ಪೋಷಣೆ ಅರಿವು ಮೂಡಿಸಿ ಜವಾಬ್ದಾರಿಯುತ ಬದುಕು ನಡೆಸಲು ಪ್ರೇರೇಪಿಸಬೇಕು. ಮಕ್ಕಳಲ್ಲಿ ಸದ್ಗುಣ ಬೆಳೆಸಲು ಪ್ರಯತ್ನಿಸಬೇಕು. ಏಸುಕ್ರಿಸ್ತರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು’ ಎಂದರು.
ಧರ್ಮ ಕೇಂದ್ರದ ಆರೋಗ್ಯ ಸ್ವಾಮಿ ಮಾತನಾಡಿ, ‘ಮಕ್ಕಳು ಧಾರ್ಮಿಕವಾಗಿ ಏಸುವಿನ ದಾರಿಯಲ್ಲಿ ನಡೆದು ಇತರರಿಗೂ ಮಾದರಿಯಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.
ಚಿಕ್ಕೋಡಿ ಚರ್ಚ್ನ ವಿಮುಕ್ತಿ ಸಂಸ್ಥೆ ನಿರ್ದೇಶಕ ಫಾ.ವಿನ್ಸೆಂಟ್ ಡಿಸೋಜ, ಫಾ.ಸುನಿಲ್, ರಾಚಮ್ಮ, ನವೀನ್ ಸುಜನ, ಲಿಲ್ಲಿ ಜೋಸೆಫ್, ಎ.ಚಾಚು, ಮಚಿ, ಅರುಣ, ಲೂಯಿಸ್, ಥಾಮಸ್, ಆ್ಯಂಡ್ರ್ಯೂ ಸಂತೋಷ್, ಬ್ರದರ್ ಸ್ಯಾಮ್ ವೆಲ್, ಸೇವಾದರ್ಶಿ ಆಲ್ಬರ್ಟ್, ಅಲ್ಪೋನ್ಸಾ, ಶಿಕ್ಷಕಿ ರಾಜಮ್ಮ ಇದ್ದರು.