ಮೈಸೂರು: ‘ಕಾನೂನು ಮತ್ತು ಜೀವನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನ್ಯಾಯಾಲಯದಲ್ಲಿ ನಮ್ಮ ಕಕ್ಷಿದಾರರ ಪರವಾಗಿ ವಾದಿಸುತ್ತೇವೆ. ಅದೇ ರೀತಿ ಜೀವನದಲ್ಲಿ ಗುರಿ ಸಾಧನೆಗೆ ಅಥವಾ ತಮಗೆ ಬೇಕಾದದ್ದನ್ನು ಪಡೆಯಲು ಮತ್ತೊಬ್ಬರ ಎದುರು ವಾದ ಮಾಡುತ್ತೇವೆ’ ಎಂದು ಭೂಪಾಲ್ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಸೂರ್ಯಪ್ರಕಾಶ್ ತಿಳಿಸಿದರು.
ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಕಾರ್ಪೊರೇಟ್ ಕಾನೂನು ಕುರಿತು ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಅಣುಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
‘ನಾವು ಅರ್ಥೈಸಿಕೊಂಡಿರುವ ವಿಷಯವನ್ನು ಮತ್ತೊಬ್ಬರಿಗೆ ಅರ್ಥವಾಗುವಂತೆ ವಾದ ಮಂಡಿಸದಿದ್ದರೆ ನ್ಯಾಯಾಲಯ ಪ್ರಕರಣಗಳಲ್ಲಿ ಸೋಲುಂಟಾಗುವ ಸಾಧ್ಯತೆಯಿದೆ. ಈ ಕಲೆಯನ್ನು ಕಾಲೇಜು ಸಮಯದಲ್ಲೇ ಕರಗತ ಮಾಡಿಕೊಳ್ಳಬೇಕು. ಓದು ಹಾಗೂ ನಿರಂತರ ಸಂವಹನದಿಂದ ಅದು ಸಾಧ್ಯ’ ಎಂದರು.
‘ಅತ್ಯುತ್ತಮವಾಗಿ ವಿಷಯವನ್ನು ಪ್ರಸ್ತುತ ಪಡಿಸಲು ಕಲಿತಾಗ ಮಾತ್ರ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಇದರೊಂದಿಗೆ ಉತ್ತಮ ಕೌಶಲ್ಯ ಹಾಗೂ ಭರವಸೆ ಇರಬೇಕು’ ಎಂದು ಹೇಳಿದರು.
ಭೂಪಾಲ್ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ವಿ.ವಿಜಯಕುಮಾರ್, ಜೆಎಸ್ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್, ಪ್ರಾಂಶುಪಾಲ ಡಾ.ಎಸ್. ನಟರಾಜು, ಸುರಾನ ಅಂಡ್ ಸುರಾನ ಸಂಸ್ಥೆಯ ಮುಖ್ಯಸ್ಥ ಪ್ರೀತಮ್ ಸುರಾನ ಇದ್ದರು.