ಮೈಸೂರು: ‘ಮತದಾನದ ಪ್ರಾಮುಖ್ಯತೆಯನ್ನು ತಿಳಿದು ಕಡ್ಡಾಯವಾಗಿ ಹಕ್ಕು ಚಲಾಯಿಸಬೇಕು’ ಎಂದು ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿ ಎಂ.ಶಾಂತಾ ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲಾ ಪಂಚಾಯಿತಿಯಲ್ಲಿ ಭಾನುವಾರ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸ್ವೀಪ್ ಸಮಿತಿಯು ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಾಗೂ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಇದರಿಂದಾಗಿ ದೇಶದಾದ್ಯಂತ 97 ಕೋಟಿ ಜನರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ’ ಎಂದರು.
‘ಗ್ರಾಮೀಣ, ನಗರ ಪ್ರದೇಶದಲ್ಲಿನ ಯುವಕರು ಹಾಗೂ ಮತದಾರರಲ್ಲಿ ಚುನಾವಣಾ ಸಾಕ್ಷರತೆ ಮೂಡಿಸಬೇಕು. ಯಾವುದೇ ಮತದಾರರು ಆಸೆ– ಆಮಿಷಗಳಿಗೆ ಒಳಗಾಗದೆ ಸ್ವಯಂ ನಿರ್ಣಯ ಕೈಗೊಂಡು ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು’ ಎಂದು ತಿಳಿಸಿದರು.
ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ರಂಜಿನಿ, ಪ್ರೌಢಶಾಲಾ ವಿಭಾಗದ ನೋಡಲ್ ಅಧಿಕಾರಿ ದೇವರಾಜು, ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯರಾದ ಹೇಮಲತಾ, ಶಶಿಕಲಾ, ಮಂಗಳ ಮೂರ್ತಿ, ಎಚ್.ಎಸ್. ಪ್ರಕಾಶ್, ಮಂಜುನಾಥ್ ಬಿ., ಶಿವಕುಮಾರ್ ಬಿ.ಎಲ್., ನಾಗಚಂದ್ರ, ರಮೇಶ್ ಬಿ. ಪಾಲ್ಗೊಂಡಿದ್ದರು.