ಹುಣಸೂರು: ಇಲ್ಲಿಯ ಸೆಸ್ಕ್ ಉಪವಿಭಾಗ ಕಚೇರಿ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹೊಂದಿದ್ದ ಭಿತ್ತಿಚಿತ್ರಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ಕ್ರಮಕ್ಕೆ ಒತ್ತಾಯಿಸಿ ಇಲಾಖೆ ಸಿಬ್ಬಂದಿ ಕಪ್ಪುಪಟ್ಟಿ ತೊಟ್ಟು ಮೌನ ಪ್ರತಿಭಟನೆ ನಡೆಸಿದರು.
ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಸಿ.ಬಸವಣ್ಣ, ಎಸ್.ಸಿ ಮತ್ತು ಎಸ್.ಟಿ ಘಟಕದ ಅಧ್ಯಕ್ಷ ಶೇಖರ್, ಕಾರ್ಯದರ್ಶಿ ಎಂ.ಶಾಂತರಾಜು, ನೌಕರರ ಸಂಘದ ಅಧ್ಯಕ್ಷ ಮರಿಗೌಡ, ನೌಕರರ ಸಂಘದ ಸದಸ್ಯ ಹಾಗೂ ಸಹಾಯಕ ಎಂಜಿನಿಯರ್ ಪುರುಷೋತ್ತಮ್, ಲೈನ್ ಮೆನ್, ಇಲಾಖೆ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಸೆಸ್ಕ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ರಮೇಶ್ ಅವರ ಹುಟ್ಟುಹಬ್ಬದ ಸಂಬಂಧ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಭಿತ್ತಿಪತ್ರ ಅ. 24ರಂದು ಹಚ್ಚಲಾಗಿತ್ತು ಎಂದು ಸೆಸ್ಕ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಕಲಿಂ ಮಹಮ್ಮದ್ ತಿಳಿಸಿದರು.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತಪ್ಪು ಎಸಗಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ತನಿಖೆಗೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.