ನಂಜನಗೂಡು: ಹಗಲು, ರಾತ್ರಿ ಎನ್ನದೇ ನಿತ್ಯ 6- 8 ತಾಸು ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಕೆಪಿಟಿಸಿಎಲ್ ಕ್ರಮವನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಶುಕ್ರವಾರ ಸ್ಥಳೀಯ ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿ ಗಂಟೆಗೊಮ್ಮೆ ವಿದ್ಯುತ್ ನಿಲುಗಡೆ ಮಾಡುತ್ತಿರುವುದರಿಂದ ವಾಣಿಜ್ಯ ಉದ್ದಿಮೆದಾರರಿಗೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ತೀವ್ರ ತೊಂದರೆ ಉಂಟಾಗಿದೆ. ಸಂಜೆ 6 ರಿಂದ ರಾತ್ರಿ 10 ಗಂಟೆ ನಡುವೆಯೂ ಅನಿಯಮಿತ ವಿದ್ಯುತ್ ನಿಲುಗಡೆಯಿಂದಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಅಭ್ಯಾಸಕ್ಕೂ ಅಡಚಣೆಯಾಗಿದೆ. ವಿದ್ಯುತ್ ಅಭಾವ ಇದ್ದರೆ ಹಗಲು ವೇಳೆ ಒಂದೆರಡು ತಾಸು ನಿರ್ದಿಷ್ಟ ಸಮಯದಲ್ಲಿ ನಿಲುಗಡೆ ಮಾಡಬೇಕು. ರಾತ್ರಿ ವೇಳೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಂಜನಗೂಡು ಸೆಸ್ಕ್ ವಿಭಾಗದ ನರಸಿಂಹೇಗೌಡ ಮಾತನಾಡಿ, ಪಟ್ಟಣ ಪರಿಮಿತಿಯಲ್ಲಿ ದಿನವೂ 18 ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುವುದು. ವಿದ್ಯುತ್ ನಿಲುಗಡೆ ಸಮಯವನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು. ಸಂಘಟನೆ ಅಧ್ಯಕ್ಷ ಎಸ್.ಅಜಯ್, ಕೃಷ್ಣ, ಮಾದೇಶು, ಶಿವು, ಮಹೇಶ ಮಹದೇವನಾಯಕ ಪದ್ಮನಾಭ್, ವಾಸು, ಮಂಜು ಹನುಮಂತು, ರವಿ, ಚೇತನ್ ಪ್ರತಿಭಟನೆಯಲ್ಲಿದ್ದರು.