ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶಗೌಡ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ ಕಾರ್ಯ ಕರ್ತರೊಬ್ಬರ ಮೇಲೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕೈ ಮಾಡಿದರು.
ನಗರದ ದಟ್ಟಗಳ್ಳಿಯ ಸಾ.ರಾ. ಕನ್ವೆನ್ಷನ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ಮೈಸೂರು ನಗರ ಹಾಗೂ ಗ್ರಾಮಾಂತರ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ ಹೊರಡಲು ಮುಂದಾದಾಗ ಕುಮಾರಸ್ವಾಮಿ ಅವರನ್ನು ಕೆಲ ಕಾರ್ಯಕರ್ತರು ಮುತ್ತಿಕೊಂಡರು.
‘ಯಾರಿಗೆ ಟಿಕೆಟ್ ನೀಡಬೇಕು ಎಂಬುದು ನನಗೆ ಗೊತ್ತಿದೆ. ಇಲ್ಲಿಂದ ಹೊರಡಿ. ‘ಬಿ’ ಫಾರ್ಮ್ ಕೊಡಲು ನಾನಿಲ್ಲಿಗೆ ಬಂದಿಲ್ಲ’ ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಹೇಳಿದರು. ತಮ್ಮ ಮಾತು ಕೇಳದೆ ಮತ್ತೆ ಮುತ್ತಿಕೊಂಡ ಕಾರ್ಯಕರ್ತರನ್ನು ತಳ್ಳಿದರು. ತಕ್ಷಣವೇ ಅವರ ಭದ್ರತಾ ಸಿಬ್ಬಂದಿ ಆ ಕಾರ್ಯಕರ್ತರನ್ನು ಅಲ್ಲಿಂದ ಹೊರದಬ್ಬಿದರು.
ಟಿಕೆಟ್ ನೀಡುವ ವಿಚಾರದ ಬಗ್ಗೆ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕೆಂದು ಮಹೇಶ್ ಕೋರಿಕೊಂಡರು.
ಆದರೆ, ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಅವರನ್ನು ಜೆಡಿಎಸ್ಗೆ ಕರೆತಂದು ಹುಣಸೂರು ಕ್ಷೇತ್ರದಿಂದ ಟಿಕೆಟ್ ಕೊಡಿಸಲು ಪ್ರಯತ್ನ ನಡೆಯುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಮಹೇಶ್ ಅವರ ಮೇಲೆ ಕೈ ಮಾಡಲು ಕೆಲವರು ಮುಂದಾದರು.
ಕಪಾಳಮೋಕ್ಷ ಮಾಡಿಲ್ಲ: ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಟಿಕೆಟ್ ಸಂಬಂಧ ಹುಣಸೂರು ಕ್ಷೇತ್ರದ ಕೆಲ ಕಾರ್ಯಕರ್ತರು ಸಭೆಯ ಬಳಿಕ ತಳ್ಳಾಟ ನಡೆಸಿದರು. ಜಿ.ಟಿ.ದೇವೇಗೌಡ ಕುಟುಂಬದವರಿಗೆ ಟಿಕೆಟ್ ಕೊಡಬೇಕೆಂದು ಏರುದನಿಯಲ್ಲಿ ಆಗ್ರಹಿಸಿದರು.
ಆಗ ನಾನು ಅವರನ್ನು ತಳ್ಳಿಕೊಂಡು ಮುಂದೆ ಬಂದೆ. ಯಾರಿಗೂ ಕಪಾಳಮೋಕ್ಷ ಮಾಡಿಲ್ಲ. ಕೊನೆಯಲ್ಲಿ ಕಾರ್ಯಕರ್ತರೇ ಬಂದು ಕ್ಷಮೆಯಾಚಿಸಿದರು’ ಎಂದರು. ‘ವಿಶ್ವನಾಥ್ ಅವರು ಪಕ್ಷ ಸೇರುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಇನ್ನು ಪ್ರಜ್ವಲ್ ರೇವಣ್ಣ ಈಗಾಗಲೇ ಹಳ್ಳಿ ಹಳ್ಳಿ ಸುತ್ತಾಡಿ ಪಕ್ಷ ಸಂಘಟಿಸುತ್ತಿದ್ದಾರೆ’ ಎಂದು ಹೇಳಿದರು.